ಮಂಗಳೂರು ವಿವಿ ಉತ್ತರ ವಲಯ ಫುಟ್ಬಾಲ್: ಆಳ್ವಾಸ್ ಚಾಂಪಿಯನ್
ಮಣಿಪಾಲ, ಅ .6: ಮಣಿಪಾಲ ಎಜ್ಯುಕೇಷನಲ್ ಫೌಂಡೇಷನ್ ಹಾಗೂ ಮಂಗಳೂರು ವಿವಿಗಳ ಜಂಟಿ ಆಶ್ರಯದಲ್ಲಿ ಇಲ್ಲಿನ ಮಾಧವ ಪೈ ಸ್ಮಾರಕ ಕಾಲೇಜು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮಂಗಳೂರು ವಿವಿ ಮಟ್ಟದ (ಉಡುಪಿ ವಲಯ) ಫುಟ್ಬಾಲ್ ಟೂರ್ನಿಯಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಒಟ್ಟು 21 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜು ರನ್ನರ್ಅಪ್ ಸ್ಥಾನ ಪಡೆದರೆ, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಫುಟ್ಬಾಲ್ ತಂಡ ಮೂರನೇ ಹಾಗೂ ಕಟೀಲಿನ ಎಸ್ಡಿಪಿಟಿ ಕಾಲೇಜು ತಂಡ ನಾಲ್ಕನೇ ಸ್ಥಾನವನ್ನು ಪಡೆದವು.
ಆಳ್ವಾಸ್ ಕಾಲೇಜು ಮೂಡಬಿದ್ರೆ ತಂಡದ ಶೌರ್ಯ ಟೂರ್ನಿಯ ಅತ್ಯುತ್ತಮ ಸ್ಟ್ರೈಕರ್, ಅದೇ ತಂಡದ ಕೀರ್ತನ್ ಉತ್ತಮ ಡಿಫೆಂಡರ್ ಹಾಗೂ ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ತಂಡದ ಶಬ್ದಬ್ ಉತ್ತುಮ ಗೋಲ್ಕೀಪರ್ ಆಗಿ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರುಕಟ್ಟೆ ಮಂಡಳಿ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ ಹಾಗೂ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ರಾಧಿಕ ಪೈ, ಆಡಳಿತಾಧಿಕಾರಿ ಪ್ರೊ. ಪಿ.ದಯಾನಂದ ಶೆಟ್ಟಿ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಂತೋಷ್ ಪಿ.ಎಂ. ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನುಸೂಯ ಕಾರ್ಯಕ್ರಮ ನಿರೂಪಿಸಿದರೆ ಗಣಕ ಯಂತ್ರ ವಿಭಾಗದ ಉಪನ್ಯಾಸಕಿ ಬಿಂದ್ಯಾ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಂತೋಷ್ ಪಿ.ಎಂ. ವಂದಿಸಿದರು.