ಬೆಳ್ಮಣ್: ಟೋಲ್ಗೇಟ್ ನಿರ್ಮಾಣದ ವಿರುದ್ಧ ಇಂದು ಬೃಹತ್ ಪ್ರತಿಭಟನೆ
ಉಡುಪಿ, ಅ.6: ರಾಜ್ಯ ಸರಕಾರ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಇದೀಗ ಬೆಳ್ಮಣ್ ಸಮೀಪ ಟೋಲ್ ಗೇಟ್ ನಿರ್ಮಿಸಿ ವಾಹನ ಚಾಲಕರಿಂದ ಸುಂಕ ವಸೂಲು ಮಾಡುವ ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿ ನಾಳೆ ಬೆಳ್ಮಣ್ನಲ್ಲಿ ಸಾರ್ವಜನಿಕರಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಳ್ಮಣ್ನ ಟೋಲ್ ಗೇಟ್-ಸುಂಕ ವಸೂಲಾತಿ ಕೇಂದ್ರ ಹೋರಾಟ ಸಮಿತಿಯ ಅಧ್ಯಕ್ಷ ಎಸ್. ಸುಹಾಸ್ ಹೆಗ್ಡೆ ತಿಳಿಸಿದ್ದಾರೆ.
ಬೆಳ್ಮಣ್ ಆಸುಪಾಸಿನ 40ಕ್ಕೂ ಅಧಿಕ ಹಳ್ಳಿಗಳ 10,000ಕ್ಕೂ ಅಧಿಕ ಮಂದಿ ಪಕ್ಷಾತೀತವಾಗಿ, ಧರ್ಮಾತೀತವಾಗಿ ನಡೆಯುವ ಈ ಹೋರಾಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಶನಿವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸುಹಾಸ್ ಹೆಗ್ಡೆ ತಿಳಿಸಿದರು.
ರಾಜ್ಯ ಸರಕಾರ ಖಾಸಗಿ ಗುತ್ತಿಗೆದಾರರಾದ ಆರ್ಎನ್ಎಸ್ ಸಂಸ್ಥೆಯ ಮೂಲಕ ಕಾರ್ಕಳ-ಪಡುಬಿದ್ರಿಯನ್ನು ಸಂಪರ್ಕಿಸುವ ಈ ರಾಜ್ಯ ಹೆದ್ದಾರಿಯನ್ನು ನಾಲ್ಕು ವರ್ಷಗಳ ಹಿಂದೆ ಅಗಲೀಕರಣಗೊಳಿಸಿದೆ. ಆದರೆ ಇದೀಗ ಏಕಾಏಕಿಯಾಗಿ ಮೈಸೂರಿನ ಮಿತ್ರ ಇನ್ಫೋ ಸೊಲ್ಯೂಷನ್ ಎಂಬ ಖಾಸಗಿ ಸಂಸ್ಥೆಗೆ ಬೆಳ್ಮಣ್ ಪರಿಸರದ ಸರಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಸುಂಕ ವಸೂಲಾತಿ ಕೇಂದ್ರ (ಟೋಲ್ಗೇಟ್) ನಿರ್ಮಿಸಿ ಸುಂಕ ವಸೂಲು ಮಾಡಲು ಗುತ್ತಿಗೆಯನ್ನು ನೀಡಿದೆ ಎಂದವರು ವಿವರಿಸಿದರು.
30 ಕಿ.ಮೀ.ನಲ್ಲಿ 3 ಟೋಲ್: ಈಗ ರಾಜ್ಯ ಹೆದ್ದಾರಿ ನಂ.1 ಎಂದು ಕರೆಯಲಾಗುವ ಕಾರ್ಕಳ-ಪಡುಬಿದ್ರಿ ಹೆದ್ದಾರಿ ಬೆಳ್ಮಣ್ ಮೂಲಕ ಹಾದುಹೋಗುತ್ತದೆ. ಆಸುಪಾಸಿನ ಸುಮಾರು 40ಕ್ಕೂ ಅಧಿಕ ಹಳ್ಳಿಗಳನ್ನು ಸಂಪರ್ಕಿಸುವ, ಬೆಸೆಯುವ ಮುಖ್ಯ ರಸ್ತೆ ಇದಾಗಿದೆ. ಹೀಗಾಗಿ ಇಲ್ಲಿ ಟೋಲ್ ಗೇಟ್ ನಿರ್ಮಾಣದಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ. ಅಲ್ಲದೇ ಇದರಿಂದ ಮಂಗಳೂರಿನಿಂದ ಬರುವಾಗ ಕೇವಲ 30 ಕಿ.ಮೀ. ಅಂತರದಲ್ಲಿ ಮೂರು ಕಡೆಗಳಲ್ಲಿ (ಸುರತ್ಕಲ್, ಹೆಜಮಾಡಿ, ಬೆಳ್ಮಣ್) ನಾವು ದುಬಾರಿ ಟೋಲ್ ನೀಡಬೇಕಾಗುತ್ತದೆ ಎಂದು ಸುಹಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಸ್ಥಳೀಯರಿಗೆ ಯಾವುದೇ ಮಾಹಿತಿಯನ್ನು ನೀಡದೇ ಟೋಲ್ಗೇಟ್ ನಿರ್ಮಾಣಕ್ಕೆ ಮುಂದಾಗಿದೆ. ರಾಜ್ಯ ಹೆದ್ದಾರಿಯನ್ನು ರಾಜ್ಯ ಸರಕಾರ ಚತುಷ್ಪಥಗೊಳಿಸಿದರೂ ಎಲ್ಲೂ ಟೋಲ್ ಸಂಗ್ರಹಿಸುವ ಪದ್ಧತಿ ಇಲ್ಲ. ಆದರೆ ಬೆಳ್ಮಣ್ನಲ್ಲಿ ಮಾತ್ರ ಏಕಾಏಕಿಯಾಗಿ ಟೋಲ್ ಸಂಗ್ರಹಕ್ಕೆ ಗುತ್ತಿಗೆದಾರರನ್ನು ನೇಮಿಸಿದ್ದು, ಆ ಸಂಸ್ಥೆ ಬೆಳ್ಮಣ್ನಲ್ಲಿ ಸುಂಕ ವಸೂಲಾತಿ ಕೇಂದ್ರ ನಿರ್ಮಿಸಲು ಬೆಳ್ಮಣ್ ಗ್ರಾಪಂಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದವರು ನುಡಿದರು.
ಸಂಸ್ಥೆ ಟೋಲ್ಗೇಟ್ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಸರಕಾರಿ ಪ. ಪೂ.ಕಾಲೇಜು, ಬ್ಯಾಂಕ್, ಗ್ರಾಪಂ ಇದ್ದು, ಸ್ಥಳೀಯ ರೋಟರಿ ಸಂಸ್ಥೆ ಸ್ಥಳೀಯರ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಶಾಶ್ವತ ಪಾರ್ಕಿಂಗ್ ವ್ಯವಸ್ಥೆಗಾಗಿ ಜಾಗವನ್ನು ಸಮತಟ್ಟುಗೊಳಿಸಿ, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಇದೀಗ ಇಲ್ಲೇ ಟೋಲ್ಗೇಟ್ ನಿರ್ಮಾಣಕ್ಕೆ ಮುಂದಾಗಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ ಎಂದು ಹೆಗ್ಡೆ ಹೇಳಿದರು.
ಯಾವುದೇ ಕಾರಣಕ್ಕೂ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ಗೇಟ್ ಬೇಡವೇ ಬೇಡ ಎಂಬುದು ನಮ್ಮ ಖಚಿತ ನಿರ್ಧಾರ. ಇದಕ್ಕಾಗಿ ಬೆಳ್ಮಣ್ ಹಾಗೂ ಆಸುಪಾಸಿನ 40 ಹಳ್ಳಿಗಳ ಜನಸಾಮಾನ್ಯರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಡಕ್ಕೆ ಸಜ್ಜಾಗಿದ್ದಾರೆ. ಈ ಹೋರಾಟಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಧರ್ಮಗುರುಗಳು, ಉದ್ಯಮಿಗಳು, ವರ್ತಕರು, ಎಲ್ಲಾ ಸಂಘಸಂಸ್ಥೆಗಳು, ಬಸ್, ರಿಕ್ಷಾ, ಟ್ಯಾಕ್ಸಿ ಚಾಲಕ-ಮಾಲಕರು, ರೈತರು ಹಾಗೂ ಮಹಿಳೆಯರು ಸೇರಿದಂತೆ ಜನಸಾಮಾನ್ಯರು ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ.
ರವಿವಾರ ಬೆಳಗ್ಗೆ 9:30ರಿಂದ ಅಪರಾಹ್ನ 3 ಗಂಟೆಯವರೆಗೆ ನಡೆಯುವ ಪ್ರತಿಭಟನಾ ಹೋರಾಟದಲ್ಲಿ 10,000ಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಶಾಂತಿಯುತವಾಗಿ ನಡೆಯುವ ಈ ಹೋರಾಟ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಕೇಂದ್ರ ಸ್ಥಾಪನೆಯ ಪ್ರಸ್ತಾಪದಿಂದ ರಾಜ್ಯ ಸರಕಾರ ಹಿಂದೆ ಸರಿಯುವವರೆಗೂ ಮುಂದುವರಿಯಲಿದೆ ಎಂದು ಅವರು ಸಮಿತಿಯ ಪರವಾಗಿ ಎಚ್ಚರಿಕೆ ನೀಡಿದರು.
ರಾಜ್ಯ ಹೆದ್ದಾರಿಯಲ್ಲಿ ಒಟ್ಟು ಎಂಟು ಕಡೆಗಳಲ್ಲಿ ಸುಂಕ ಸಂಗ್ರಹಿಸುವ ಉದ್ದೇಶ ಸರಕಾರಕ್ಕಿದ್ದು, ಬೆಳ್ಮಣ್ನಲ್ಲಿ ಪ್ರಾಯೋಗಿಕವಾಗಿ ಇದನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದ ಸಮಿತಿಯ ಸರ್ವಜ್ಞ ತಂತ್ರಿ, ಸುಂಕ ಸಂಗ್ರಹದ ವಿರುದ್ಧ ಬೆಳ್ಮಣ್ ಗ್ರಾಪಂ ಈಗಾಗಲೇ ನಿರ್ಣಯ ಕೈಗೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಶಶಿಧರ ಶೆಟ್ಟಿ ನಂದಳಿಕೆ, ಶರದ್ ಶೆಟ್ಟಿ ಕೆ., ಹರಿಪ್ರಸಾದ್ ನಂದಳಿಕೆ ಉಪಸ್ಥಿತರಿದ್ದರು.