ಉಡುಪಿ: ಅ. 22ರಿಂದ ಜಿಲ್ಲೆಯಲ್ಲಿ ಕುಷ್ಠರೋಗ ಪತ್ತೆ ಕಾರ್ಯಕ್ರಮ
ಉಡುಪಿ, ಅ. 6: ಜಿಲ್ಲೆಯಲ್ಲಿ ಅ.22ರಿಂದ ನವೆಂಬರ್ 4ರವರೆಗೆ ಪ್ರತಿ ಮನೆ ಮನೆಗೆ ಭೇಟಿ ನೀಡಿ ಕುಷ್ಠರೋಗಿಗಳನ್ನು ಪತ್ತೆ ಹಚ್ಚುವ ‘ಸ್ಪರ್ಶ ಲೆಪ್ರಸಿ ಎಲಿಮಿನೇಷನ್’ ಕಾರ್ಯಕ್ರಮನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಷ್ಠರೋಗ ನಿರ್ಮೂಲನೆ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಜಿಲ್ಲೆಯ 2,66,000 ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ಮನೆಯಲ್ಲಿರುವ 2 ವರ್ಷ ಮೀರಿದ ಎಲ್ಲರ ಚರ್ಮ ತಪಾಸಣೆ ನಡೆಸ ಲಾಗುವುದು. ಸಂಶಯಾಸ್ಪದ ಕುಷ್ಠರೋಗ ಚಿಹ್ನೆ ಕಂಡುಬಂದವರಿಗೆ, ಅಂತಹ ಪ್ರಕರಣಗಳು ದೃಡಪಟ್ಟರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಮನೆ ಮನೆ ಭೇಟಿಗಾಗಿ ಜಿಲ್ಲೆಯಲ್ಲಿ 952ತಂಡಗಳನ್ನು ಹಾಗೂ 192 ಮೇಲ್ಚಿಚಾರಕನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಕುಷ್ಠರೋಗ ತಪಾಸಣೆಗೆ ಮನೆ ಮನೆಗೆ ಭೇಟಿ ನೀಡುವ ಕುರಿತಂತೆ ಜಿಲ್ಲೆಯ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ಎಲ್ಲಾ ಗ್ರಾಪಂಗಳಲ್ಲಿ ಹಾಗೂ ಶಾಲೆಗಳಲ್ಲಿ ಸೂಕ್ತ ಅರಿವು ಮೂಡಿಸುವಂತೆ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಸಂಘಸಂಸ್ಥೆಗಳ ನೆರವು ಪಡೆದು ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಚಿಂಬಾಲ್ಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.