ಬೈಂದೂರು: ವಿಚಾರಣಾಧೀನ ಕೈದಿ ಪರಾರಿ
ಬೈಂದೂರು, ಅ.6: ವಿಚಾರಣಾಧೀನ ಕೈದಿಯೋರ್ವ ಬೈಂದೂರು ಪೊಲೀಸರಿಂದ ತಪ್ಪಿಸಿಕೊಂಡು ರೈಲಿನಿಂದ ನೆಗೆದು ಪರಾರಿಯಾದ ಘಟನೆ ಶನಿವಾರ ಸಂಜೆಯ ಸುಮಾರಿಗೆ ಬೈಂದೂರು ರೈಲು ನಿಲ್ದಾಣದ ಬಳಿ ನಡೆದಿದೆ.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಬೆಳಾರುಮಕ್ಕಿಯ ಸುರೇಶ್ ನಾಯ್ಕಿ (26) ಪರಾರಿಯಾದ ಆರೋಪಿ.
ಕಳೆದ ಆ. 6ರಂದು ಪತ್ನಿಯ ತಂಗಿಯನ್ನು ಬಲಾತ್ಕಾರಕ್ಕೆ ಯತ್ನಿಸಿದ ಬಗ್ಗೆ ಪತ್ನಿ ನೀಡಿದ ದೂರಿನಂತೆ ಸುರೇಶ್ ನಾಯ್ಕನನ್ನು ಪೋಕ್ಸೊ ಕಾಯ್ದೆಯಡಿ ಬೈಂದೂರು ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ಸುರೇಶ್ನನ್ನು ಕಾರವಾರ ಜೈಲಿನಲ್ಲಿ ಇರಿಸಲಾಗಿತ್ತು.
ಪೋಕ್ಸೊ ಕೇಸಿನ ವಿಚಾರಣೆ ಇಂದು ಉಡುಪಿಯ ಸೆಶನ್ಸ್ ಕೋರ್ಟ್ನಲ್ಲಿದ್ದು, ಇದಕ್ಕಾಗಿ ಬೈಂದೂರಿನ ಪೊಲೀಸರು ಕಾರವಾರ ಜೈಲಿನಿಂದ ಆತನನ್ನು ಉಡುಪಿಗೆ ಕರೆಕೊಂಡು ಹೋಗಿದ್ದರು. ವಿಚಾರಣೆ ಮುಗಿದ ಬಳಿಕ ರೈಲಿನಲ್ಲಿ ಆತನನ್ನು ಕಾರವಾರಕ್ಕೆ ಕರೆದೊಯ್ಯುತಿದ್ದಾಗ, ಬೈಂದೂರು ನಿಲ್ದಾಣ ಸಮೀಪಿಸುತಿದ್ದಂತೆ ಆತ ತನಗೆ ವಾಂತಿ ಬರುವ ನಾಟಕವಾಡಿ ಶೌಚಾಲಯಕ್ಕೆ ಹೋಗಿದ್ದ. ನಿಲ್ದಾಣದ ಬಳಿ ರೈಲಿನ ವೇಗ ಕಡಿಮೆಯಾಗುತಿದ್ದಂತೆ ಆತ ಜೊತೆಗಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಒಮ್ಮಿಂದೊಮ್ಮೆ ರೈಲಿನಿಂದ ನೆಗೆದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ 15ರಿಂದ 20 ಮಂದಿ ಪೊಲೀಸರು ಸುರೇಶನಿಗಾಗಿ ಹುಡುಕಾಟದಲ್ಲಿದ್ದಾರೆ. ಆತ ಪಕ್ಕದ ಕಾಡಿನಲ್ಲಿ ಅವಿತಿರಬೇಕೆಂದು ಶಂಕಿಸಿದ್ದು, ಬೈಂದೂರು ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.