ಪಾನಮುಕ್ತದಿಂದ ಗಾಂಧಿ ಕನಸಿನ ಭಾರತ ನಿರ್ಮಾಣ ಸಾಧ್ಯ: ಸುಕುಮಾರ್ ಶೆಟ್ಟಿ
ಕುಂದಾಪುರ, ಅ.7: ಹಳ್ಳಿಗಳ ಪ್ರಗತಿಯಿಂದ ಸುಸ್ಥಿರ ಸಮಾಜ ಹಾಗೂ ಪ್ರತಿಯೊಬ್ಬರು ಪಾನಮುಕ್ತರಾಗುವುದರಿಂದ ಗಾಂಧಿ ಕನಸಿನ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ-ಉಡುಪಿ-ಕುಂದಾಪುರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ 150ನೇ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ತ್ರಾಸಿಯ ಕೊಂಕಣ ಖಾರ್ವಿ ಸಮುದಾಯ ಭವನದಲ್ಲಿ ರವಿವಾರ ಆಯೋಜಿಸಲಾದ ಜನಜಾಗೃತಿ ಜಾಥಾ ಮತ್ತು ಗಾಂಧಿ ಸ್ಮೃತಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಂಕಣಕಾರ ಕೋ.ಶಿವಾನಂದ ಕಾರಂತ ದಿಕ್ಸೂಚಿ ಭಾಷಣ ಮಾಡಿ, ಮದ್ಯ ಪಾನದಿಂದ ಕೇವಲ ಒಬ್ಬನ ಬದುಕು ಮಾತ್ರ ದಿಕ್ಕು ತಪ್ಪುವುದಲ್ಲ. ಬದಲಾಗಿ ಆತನ ಕುಟುಂಬ, ಈ ಸಮಾಜದ ಸ್ವಾಸ್ಥ್ಯವು ಕೆಡುತ್ತದೆ. ಇಂತಹ ದುಶ್ಚಟಗಳಿಂದ ದೂರವಿರಲು ಮೊದಲಿಗೆ ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸವಿರಬೇಕು. ಪರಿಸರದ ಸ್ವಚ್ಛತೆ ಜತೆಗೆ ಮನಸ್ಸಿನ ಸ್ವಚ್ಛತೆಗೂ ಾವು ಮುಂದಾಗಬೇಕಾಗಿದೆ ಎಂದರು.
ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ್ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ಶ್ಯಾಮಲಾ ಕುಂದರ್, ನಾರಾಯಣ ಗುಜ್ಜಾಡಿ, ಗ್ರಾಪಂ ಅಧ್ಯಕ್ಷ ತ್ರಾಸಿಯ ಸುಧಾಕರ ಆಚಾರ್ಯ, ಹೊಸಾಡುವಿನ ಚಂದ್ರಶೇಖರ ಪೂಜಾರಿ, ಗಂಗೊಳ್ಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಅಖಿಲ ಭಾರತ ಕೊಂಕಣ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ಕೆ.ಬಿ.ಖಾರ್ವಿ, ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ವಾಸಪ್ಪ ನಾಯ್ಕಿ, ಜನಜಾಗೃತಿ ವೇದಿಕೆಯ ತ್ರಾಸಿ ವಲಯದ ಅಧ್ಯಕ್ಷ ರಾಜು ದೇವಾಡಿಗ, ಪ್ರಗತಿ ಬಂಧು ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷ ಎಚ್.ಎಂ.ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಕಲ್ಪನೆಯಲ್ಲಿ ಪಾನಮುಕ್ತ ಸಮಾಜ ಎಂಬ ವಿಷಯದ ಕುರಿತ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಡೇರ ಹೋಬಳಿಯ ಸರಕಾರಿ ಪ್ರೌಢಶಾಲೆಯ ಸರಸ್ವತಿ ಪ್ರಥಮ, ಕಂಡ್ಲೂರಿನ ರಾಮಸನ್ ಪ್ರೌಢಶಾಲೆಯ ಸುಜಯ ದ್ವಿತೀಯ ಹಾಗೂ ಗೋಳಿಯಂಗಡಿ ಸರಕಾರಿ ಪ್ರೌಢಶಾಲೆಯ ಪವಿತ್ರಾ ತೃತೀಯ ಬಹುಮಾನವನ್ನು ಪಡೆದಿದ್ದು, ಇವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬೈಂದೂರಿನ ಶಶಿರೇಖಾ ಪಿ. ಸ್ವಾಗತಿಸಿದರು. ಕುಂದಾಪುರದ ಮುರಳೀಧರ್ ಶೆಟ್ಟಿ ವಂದಿಸಿದರು. ಕೃಷಿ ಅಧಿಕಾರಿ ಚೇತನ್ ಹಾಗೂ ಚಿತ್ತೂರು ವಲಯದ ಮೇಲ್ವಿಚಾರಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು.