ರಾಜ್ಯ ಮಟ್ಟದ ಅಂತರ ಶಾಖಾ ಕರಾಟೆ ಸ್ಪರ್ಧೆ ಸಮಾರೋಪ
ಉಡುಪಿ, ಅ.7: ಉಡುಪಿಯ ಬುಡೋಕಾನ್ ಕರಾಟೆ ಮತ್ತು ಸೆಲ್ಫ್ ಡಿಫೆನ್ಸ್, ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಅಂತರ್ ಶಾಖಾ ಕರಾಟೆ ಸ್ಪರ್ಧಾಕೂಟದ ಸಮಾರೋಪ ಸಮಾರಂಭವು ಮಠದ ಮಧ್ವಾಂಗಣದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಪಡುಬೆಳ್ಳೆ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಜಿನರಾಜ್ ಸಾಲ್ಯಾನ್ ಮಾತನಾಡಿ, ಕರಾಟೆ ಕ್ರೀಡೆಗೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ. ಕರಾಟೆಯ ಪ್ರಾಮುಖ್ಯತೆಯನ್ನು ಪೋಷಕ ರಿಗೆ ತಿಳಿಸಬೇಕಾಗಿದೆ. ಕರಾಟೆಯಿಂದ ಶಿಸ್ತು, ಕಲಿಕೆಗೆ ಪ್ರೋತ್ಸಾಹ ಸಿಗಲು ಸಾಧ್ಯ ಎಂದು ಹೇಳಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಾಬೂನು ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ವರೋನಿಕಾ ಕರ್ನೆಲಿಯೋ, ಉಡುಪಿ ಕೆನರಾ ಬ್ಯಾಂಕ್ನ ಮುಖ್ಯ ಪ್ರಬಂಧಕ ವಿನಯ ಕುಮಾರ್ ಜಿ., ಜಿಲ್ಲಾ ಕರಾಟೆ ಶಿಕ್ಷಕ ಸಂಘದ ಅಧ್ಯಕ್ಷ ರವಿ ಸಾಲ್ಯಾನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಧುಸೂದನ್ ಜಿ.ಪೂಜಾರಿ ಅವರನ್ನು ಸನ್ಮಾನಿಸ ಲಾಯಿತು. ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಉಡುಪಿ ಬುಡೋಕಾನ್ ಕರಾಟೆ ಮತ್ತು ಸೆಲ್ಫ್ ಡಿಫೆನ್ಸ್ನ ಮುಖ್ಯ ಶಿಕ್ಷಕರಾದ ನಿತ್ಯಾನಂದ ಕೆಮ್ಮಣ್ಣು ಸ್ವಾಗತಿಸಿದರು. ಹಿರಿಯ ಶಿಕ್ಷಕ ರೋಹಿತಾಕ್ಷ ವಂದಿಸಿದರು. ಯತೀಶ ಮಟ್ಟು ಕಾರ್ಯಕ್ರಮ ನಿರೂಪಿಸಿದರು.