ಸೂರಲ್ಪಾಡಿ ಹರೀಶ್ ಕೊಲೆಯತ್ನ ಪ್ರಕರಣ: ಮತ್ತೆ ಮೂವರ ಬಂಧನ
ಮಂಗಳೂರು, ಅ.7: ಗುರುಪುರ ಸೂರಲ್ಪಾಡಿ ಬಳಿ ಸೆ.24ರಂದು ನಡೆದ ಹರೀಶ್ ಶೆಟ್ಟಿ (39) ಎಂಬವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ರೌಡಿ ಶೀಟರ್ ಒಬ್ಬ ಸೇರಿದಂತೆ ಮತ್ತೆ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ 6ಕ್ಕೇರಿದೆ.
ಸೂರಲ್ಪಾಡಿ ನಿವಾಸಿ ಮುಹಮ್ಮದ್ ಶಮೀರ್ (27), ಕೊಳಂಬೆ ಕಜೆಪದವು ನಿವಾಸಿ ಇಸಾನ್ (21), ರೌಡಿಶೀಟರ್ ಉಳಾಯಿಬೆಟ್ಟು ನಿವಾಸಿ ಮುಹಮ್ಮದ್ ಖಾಲಿದ್(30) ಬಂಧಿತ ಆರೋಪಿಗಳು.
ಇದೇ ಪ್ರಕರಣದಲ್ಲಿ ಅ.2ರಂದು ಶರೀಫ್ (24) ಸಿಫಾಝ್ (26) ಆರಿಫ್ (28) ಎಂಬವರನ್ನು ಬಂಧಿಸಲಾಗಿತ್ತು. ಸೆ.24ರಂದು ಮೂಡುಬಿದಿರೆಯ ಗಂಟಾಲ್ಕಟ್ಟೆಯಲ್ಲಿ ನಡೆದ ಇಮ್ತಿಯಾಝ್ ಕೊಲೆ ಯತ್ನಕ್ಕೆ ಪ್ರತೀಕಾರವಾಗಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಹರೀಶ್ ಶೆಟ್ಟಿಗೆ ಮಾರಕಾಯುಧದಿಂದ ಹಲ್ಲೆ ನಡೆಸಿದ್ದರು. ಇದರಿಂದ ಅವರ ಕೈಗೆ ಹಾಗೂ ಕುತ್ತಿಗೆಗೆ ಗಾಯವಾಗಿತ್ತು.
ಕಾರ್ಯಾಚರಣೆಯಲ್ಲಿ ಬಜಪೆ ಠಾಣಾ ಇನ್ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ಎಸ್ಐ ಶಂಕರ ನಾಯರಿ, ಎಎಸ್ಐ ರಾಮಚಂದ್ರ, ಹೆಡ್ಕಾನ್ಸ್ಟೇಬಲ್ ಚಂದ್ರಮೋಹನ್, ರಾಜೇಶ್, ಪ್ರೇಮಾನಂದ, ಶಶಿಧರ್ ಮತ್ತಿತರರು ಭಾಗವಹಿಸಿದ್ದರು.