ಮಂಗಳೂರು: ಎಸ್ಕೆಎಸೆಸ್ಸೆಫ್ ‘ವಿಖಾಯ ಗ್ರ್ಯಾಂಡ್ ಸೆಲ್ಯೂಟ್’ ಕಾರ್ಯಕ್ರಮ
ಮಂಗಳೂರು, ಅ. 8: ದ.ಕ. ಹಾಗೂ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಉಂಟಾದ ನೆರೆ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ ಎಸ್ಕೆಎಸೆಸ್ಸೆಫ್ ಸಂಘಟನೆಯ ನಿಸ್ವಾರ್ಥ ಸ್ವಯಂಸೇವಕ ಘಟಕವಾದ ‘ವಿಖಾಯ’ ಕಾರ್ಯಕರ್ತರಿಗೆ ‘ವಿಖಾಯ ಗ್ರ್ಯಾಂಡ್ ಸೆಲ್ಯೂಟ್’ ಅಭಿನಂದನಾ ಕಾರ್ಯಕ್ರಮ ಸೋಮವಾರ ನಗರದ ಪುರಭವನದಲ್ಲಿ ನಡೆಯಿತು.
ಎಸ್ಕೆಎಸೆಸ್ಸೆಫ್ ಜಿಲ್ಲಾ ಸಮಿತಿಯ ಕೋಶಾಧಿಕಾರಿ ಕಿನ್ಯ ಅಮೀರ್ ತಂಙಳ್ ಬಂದರ್ ಮೌಲಾ ದರ್ಗಾ ಝಿಯಾರತ್ಗೆ ನೇತೃತ್ವ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಪುರಭವನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಸಮಸ್ತ ದಕ್ಷಿಣ ಕರ್ನಾಟಕ ಅಧ್ಯಕ್ಷ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಉದ್ಘಾಟಿಸಿದರು.
ವಿಖಾಯ ಸನ್ನದ್ಧ ಸೇವಕರನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ಸಂಕಷ್ಟದಲ್ಲಿದ್ದಾಗ ಜೀವದ ಹಂಗು ತೊರೆದು, ಜಾತಿ-ಮತ ನೋಡದೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವವರೇ ನಿಜವಾದ ಸಮಾಜ ಸೇವಕರು. ಜೋಡುಪಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭ ಎಸ್ಕೆಎಸೆಸ್ಸೆಫ್ ಕಾರ್ಯಕರ್ತರು ನಡೆಸಿದ ಸೇವೆಯು ಸಮಾಜಕ್ಕೆ ಮಾದರಿಯಾಗಿದೆ. ಇಂತಹ ನಿಸ್ವಾರ್ಥ ಸೇವೆಗೆ ಯುವಕರ ಆತ್ಮವಿಶ್ವಾಸವೇ ಕಾರಣ ಎಂದರು.
ಈ ಸಂದರ್ಭ ಆರೋಗ್ಯ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಉದ್ಘಾಟಿಸಿದರು. ಎಸ್ಕೆಎಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸ್ವದಖತುಲ್ಲಾ ಫೈಝಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್ ಮುಖ್ಯ ಭಾಷಣಗೈದರು.
ವೇದಿಕೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಕೇಂದ್ರ ಸಮಿತಿಯ ಕೋಶಾಧಿಕಾರಿ ಹಬೀಬ್ ಫೈಝಿ, ಸಮಸ್ತ ದಕ್ಷಿಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ, ಮದ್ರಸಾ ಮ್ಯಾನೇಜ್ಮೆಂಟ್ ಜಿಲ್ಲಾಧ್ಯಕ್ಷ ಮೊಯ್ದಿನಬ್ಬ ಹಾಜಿ, ಜಂಇಯ್ಯತುಲ್ ಮುಅಲ್ಲಿಮೀನ್ ಜಿಲ್ಲಾಧ್ಯಕ್ಷ ಉಮರ್ ದಾರಿಮಿ ಪಟ್ಟೋರಿ, ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ. ಶಹೀದ್, ಉಸ್ಮಾನ್ ಫೈಝಿ ತೋಡಾರು, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಅಬ್ದುಲ್ ಅಝೀಝ್ ದಾರಿಮಿ, ಕೆ.ಕೆ.ಶಾಹುಲ್ ಹಮೀದ್, ಸದಾಶಿವ ಉಳ್ಳಾಲ, ರಮೇಶ್ ಬೋಳಿಯಾರ್, ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ, ಹನೀಫಿ ನಿಝಾಮಿ, ಇಸಾಕ್ ಫೈಝಿ, ಹಾರೂನ್ ಅಹ್ಸನಿ, ಸಂಚಾಲಕ ಇಕ್ಬಾಲ್ ಬಾಳಿಲ, ಜಿಲ್ಲಾ ನಾಯಕ ಪಿ.ಎ. ಮರ್ಧಾಳ ಮತ್ತಿತರರು ಉಪಸ್ಥಿತರಿದ್ದರು.