ಪಂಪ್ವೆಲ್ ಮೇಲ್ಸೇತುವೆ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ಧರಣಿ
ಮಂಗಳೂರು, ಅ.8: ಪಂಪ್ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಮತ್ತು ಹೆದ್ದಾರಿ ಅವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಸರ್ವಿಸ್ ರಸ್ತೆಗಳ ಮತ್ತು ನಂತೂರು ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪಂಪ್ವೆಲ್ ಮೇಲ್ಸೇತುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಪಂಪ್ವೆಲ್ ಮೇಲ್ಸೇತುವೆ ಬಳಿ ಧರಣಿ ನಡೆಯಿತು.
ಮಂಗಳೂರಿನ ಹೃದಯಭಾಗವಾದ ಪಂಪುವೆಲ್ನಲ್ಲಿ ಈ ಹಿಂದೆ ಇದ್ದ ಸರ್ಕಲ್ ಭಾರೀ ಹೆಸರುವಾಸಿಯಾಗಿತ್ತು. ಹೊರರಾಜ್ಯ, ಜಿಲ್ಲೆಗಳಿಂದ ಬರುವಂತಹ ಪ್ರಯಾಣಿಕರಿಗೆ ಪಂಪುವೆಲ್ ಸರ್ಕಲ್ ಗುರುತಿನ ಕೇಂದ್ರವಾಗಿತ್ತು. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡು 8 ವರ್ಷಗಳು ಕಳೆದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿತನ, ಗುತ್ತಿಗೆ ಕಂಪೆನಿಗಳ ಕಳಪೆ ನಿರ್ವಹಣೆ, ಅವೈಜ್ಞಾನಿಕ ಕಾಮಗಾರಿ, ಜನಪ್ರತಿನಿಧಿಗಳ ನಿರ್ಲಕ್ಷದಿಂದ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸರ್ವಿಸ್ ರಸ್ತೆಗಳಿಲ್ಲದೆ ವಾಹನಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ. ಇಂತಹ ಭಾರೀ ಸಮಸ್ಯೆಗಳಿಂದಾಗಿ ಪಂಪುವೆಲ್ನಲ್ಲಿ ಈಗಾಗಲೇ ಅನೇಕ ಜೀವಗಳು ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಕಳೆದ 8 ವರ್ಷಗಳ ಅವಧಿಯಲ್ಲಿ ಹಲವು ಮಂದಿ ವಾಹನ ಸವಾರರು ಜೀವವನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ದ.ಕ.ಜಿಲ್ಲಾ ರಿಕ್ಷಾ ಚಾಲಕರ-ಮಾಲಕರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಲಿ ಹಸನ್, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ, ಪಂಪ್ವೆಲ್ ಮೇಲ್ಸೇತುವೆ ಹೋರಾಟ ಸಮಿತಿಯ ಸಂಚಾಲಕ ಸುನೀಲ್ಕುಮಾರ್ ಬಜಾಲ್ ಮತ್ತಿತರರು ಪಾಲ್ಗೊಂಡಿದ್ದರು.