ಕಾಳಜಿ ಇರುವವರು ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆಯಲಿ: ಬಿಜೆಪಿ ಜನಪ್ರತಿನಿಧಿಗಳಿಗೆ ಸಚಿವ ಖಾದರ್ ಸವಾಲು
ಕಸಾಯಿ ಖಾನೆಗೆ ಸ್ಮಾರ್ಟ್ ಸಿಟಿ ಹಣ ವಿವಾದ
ಮಂಗಳೂರು, ಅ. 8: ನಗರ ಸ್ವಚ್ಛತೆಗೆ ಪೂರಕವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಸಾಯಿ ಖಾನೆ ಅಭಿವೃದ್ಧಿಗೆ ಸಲಹೆಯನ್ನಷ್ಟೆ ನೀಡಿದ್ದು, ಅದಕ್ಕೆ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದಿಂದ ಇನ್ನಷ್ಟೆ ಅನುಮತಿ ದೊರೆಯಬೇಕಿದೆ. ಈ ಬಗ್ಗೆ ವಿವಾದ ಸೃಷ್ಟಿಸುತ್ತಿರುವ ಬಿಜೆಪಿಯ ಜನಪ್ರತಿನಿಧಿಗಳು ಅಷ್ಟೊಂದು ಕಾಳಜಿ ಇದ್ದಲ್ಲಿ ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದು ನಿಲ್ಲಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸವಾಲೆಸೆದಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕಸಾಯಿಖಾನೆ ಅಭಿವೃದ್ಧಿಗೆ 15 ಕೋಟಿ ರೂ.ಗಳನ್ನು ಸಚಿವ ಖಾದರ್ರವರು ನೀಡಿದ್ದಾರೆಂಬ ಕುರಿತಾದ ಆರೋಪದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಬಿಜೆಪಿಯ ಜನಪ್ರತಿನಿಧಿಗಳಿಗೆ ಈ ಬಗ್ಗೆ ಸವಾಲೆಸೆದಿದ್ದಾರೆ.
2011ರಲ್ಲಿ ಮನಪಾದಲ್ಲಿ ಬಿಜೆಪಿ ಆಡಳಿತದಲ್ಲಿದ್ದ ಸಂದರ್ಭ ಒಂದು ವರ್ಷದ ಅವಧಿಗೆ ಕುದ್ರೋಳಿ ಕಸಾಯಿ ಖಾನೆಯನ್ನು ಬಿಜೆಪಿ ಪರ ಸಂಘ ಸಂಸ್ಥೆಯವರು ಪಡೆದು ನಡೆಸಿದ್ದರು ಆಗ ಅಲ್ಲಿ ಮೂಲಭೂತ ಸೌಕರ್ಯವಿಲ್ಲ ಎಂದು ಹೇಳಿಕೊಂಡಿದ್ದರು. ಸ್ವಚ್ಛ ಭಾರತ ಆಗಬೇಕಾದರೆ ಮೊದಲು ನಗರ ಸ್ವಚ್ಛವಾಗಬೇಕು ಎಂದು ಸಚಿವ ಖಾದರ್ ನುಡಿದರು.
ಸ್ಮಾರ್ಟ್ ಸಿಟಿಯ ಪ್ರಮುಖ ಉದ್ದೇಶವೇ ನಗರದ ಸ್ವಚ್ಛತೆ ಹಾಗೂ ಸುಂದರೀಕರಣ. ಕುದ್ರೋಳಿಯ ಕಸಾಯಿಖಾನೆ ಸ್ವಚ್ಛವಾಗಿದ್ದುಕೊಂಡು, ಅಲ್ಲಿ ವಧೆ ಮಾಡಲಾಗುವ ಮಾಂಸಾಹಾರ ಆರೋಗ್ಯಯುತವಾಗಿರಬೇಕೆಂಬ ಉದ್ದೇಶದಿಂದ ಸಲಹಾ ಮಂಡಳಿಯ ಸಭೆಯಲ್ಲಿ ಅದರ ಅಭಿವೃದ್ಧಿಗೆ ಸಲಹೆ ನೀಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವನ ನೆಲೆಯಲ್ಲಿ ನಾನು ಒಳ್ಳೆಯ ಉದ್ದೇಶದಿಂದ ಈ ಕಾರ್ಯ ಮಾಡಿದ್ದೇನೆ. ಸಲಹಾ ಮಂಡಳಿಯಲ್ಲಿ ಮನಪಾ ಆಯುಕ್ತರು, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮೇಯರ್, ಸೇರಿದಂತೆ ಮನಪಾ ವಿರೋಧ ಪಕ್ಷದ ನಾಯಕರು, ಸದಸ್ಯರು ಸಭೆಯಲ್ಲಿದ್ದು, ಅವರಿಂದ ಆಕ್ಷೇಪ ಬಂದಿಲ್ಲ. ಅವರಿಗೂ ಅಲ್ಲಿನ ಪರಿಸ್ಥಿತಿಯ ಅರಿವಿದೆ. ಹಾಗಿರುವಾಗ ಇದೀಗ ವಿವಾದ ಸೃಷ್ಟಿಸುತ್ತಿರುವ ಬಿಜೆಪಿಯ ಸಂಸದರು ಹಾಗೂ ಶಾಸಕರು ಸುಮ್ಮನೆ ಮಾಧ್ಯಮದೆದುರು ಮಾತನಾಡುವ ಬದಲು ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆಯಲಿ. ಕೇಂದ್ರದಿಂದ ಆ ಸಲಹೆಗೆ ಮನ್ನಣೆ ದೊರೆಯದಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಅವರು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆ ಎಸ್ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಮೂಲಕ ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಅನುಷ್ಠಾನಗೊಳ್ಳುವಂತದ್ದು. ಮಂಗಳೂರಿನ ಸ್ವಚ್ಛತೆ ಹಾಗೂ ಸುಂದರೀಕರಣದ ಸಲುವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ವೆನ್ಲಾಕ್ , ಮಂಗಳಾ ಕ್ರೀಡಾಂದಗಣ, ಪಂಪ್ವೆಲ್ ಬಸ್ಸು ನಿಲ್ದಾಣ, ಫುಟ್ಬಾಲ್ ಮೈದಾನ, ಬಂದರಿನ 2ನೆ ಮತ್ತು 3ನೆ ಹಂತದ ಮೀನುಗಾರಿಕಾ ಪ್ರದೇಶದ ಅಭಿವೃದ್ಧಿ ಬಗ್ಗೆಯೂ ಸಲಹೆ ನೀಡಲಾಗಿದೆ. ಬಹಳಷ್ಟು ಹಳೆಯದಾದ ಕುದ್ರೋಳಿಯ ಕಸಾಯಿಖಾನೆ ಅಭಿವೃದ್ಧಿಗೆ ಸಾಕಷ್ಟು ಬೇಡಿಕೆ ಇದೆ. ಇಲ್ಲಿನ ಮಾಂಸ ತ್ಯಾಜ್ಯದಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಅದಕ್ಕೆ ಶಾಶ್ವತ ಪರಿಹಾರ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕೆಲವೊಂದು ಜನಪ್ರತಿನಿಧಿಗಳಿಗೆ ಅನುಭವದ ಕೊರತೆ ಇದೆ ಎಂದು ತಿಳಿದಿದ್ದೆ. ಆದರೆ ಇಷ್ಟು ಕಡಿಮೆ ಎಂದು ತಿಳಿದಿರಲಿಲ್ಲ. ಪ್ರತಿಯೊಂದು ವಿಚಾರದಲ್ಲಿ ರಾಜಕೀಯ ಬೆರೆಸಿ ಸಮಾಜದಲ್ಲಿ ಭಾವನಾತ್ಮಕವಾಗಿ ವರ್ತಿಸುವುದು ರಾಜಕಾರಣಿಗಳಿಗೆ ಸರಿಯಲ್ಲ. ಇದೇ ವೇಳೆ ಗೋ ಶಾಲೆ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ ಎನ್ನುತ್ತಾರೆ. ಆದರೆ ಸ್ಮಾರ್ಟ್ ಸಿಟಿಯಲ್ಲಿ ಗೋಶಾಲೆ ಬಗ್ಗೆ ಯಾವುದೇ ಯೋಜನೆ ಇಲ್ಲ. ಪಜೀರಿನ ಗೋಶಾಲೆಗೆ ರಸ್ತೆ ಅಭಿವೃದ್ಧಿ ಪಡಿಸಿದವ ನಾನು. ಬಿಜೆಪಿಯ ಜನಪ್ರತಿನಿಧಿಗಳು ಗೋ ಶಾಲೆಯನ್ನು ಕೈ ಬಿಡಲಾಗಿದೆ ಎಂಬುದನ್ನೂ ಕೇಂದ್ರ ಸಚಿವಾಲಯಕ್ಕೆ ಪತ್ರದಲ್ಲಿ ತಿಳಿಸಲಿ. ಸ್ವಚ್ಛ ಭಾರತದ ಬಗ್ಗೆ ಕೇವಲ ಮಾತನಾಡಿದರೆ ಸಾಲದು. ಕೆಲಸ ಆಗಬೇಕು ಎಂದು ಸಚಿವ ಖಾದರ್ ಬಿಜೆಪಿ ಜನಪ್ರತಿನಿಧಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಅಕ್ರಮ ಗೋ ಸಾಗಾಟಕ್ಕೆ ಯಾರೂ ಬೆಂಬಲ ನೀಡಿಲ್ಲ. ಗೋವುಗಳ ಮಾರಾಟ ಅಥವಾ ಖರೀದಿ ರಾತ್ರಿ ಹೊತ್ತು ನಡೆಯಬಾರದು ಎಂಬ ಸಲಹೆ ನನ್ನದು. ಯಾವುದೇ ರೀತಿಯ ಅಕ್ರಮ ಸಾಗಾಟದ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ಯಾವುದೇ ರೀತಿಯಲ್ಲಿ ಮಧ್ಯಪ್ರವೇಶವನ್ನು ಮಾಡುವುದಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.
ಗೋಷ್ಠಿಯಲ್ಲಿ ಮೇಯರ್ ಭಾಸ್ಕರ್ ಕೆ., ಉಪ ಮೇಯರ್ ಮುಹಮ್ಮದ್ ಕೆ., ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ನವೀನ್ ಡಿಸೋಜಾ, ರಾಧಾಕೃಷ್ಣ, ಮನಪಾ ಸದಸ್ಯೆ ಮಮತಾ ಗಟ್ಟಿ, ಸದಾಶಿವ ಉಳ್ಳಾಲ್, ಪದ್ಮನಾಭ ರೈ ಹಾಗೂ ಇತರರು ಉಪಸ್ಥಿತರಿದ್ದರು.
ದಸರಾ ಬ್ಯಾನರ್, ಫ್ಲೆಕ್ಸ್ ತೆಗೆಯದಂತೆ ಸೂಚನೆ ನೀಡಿರುವೆ
ಪ್ಲಾಸ್ಟಿಕ್ ನಿಷೇಧದ ನಡುವೆಯೂ ನಗರದಲ್ಲಿ ದಸರಾ ಹೆಸರಿನಲ್ಲಿ ಫ್ಲೆಕ್ಸ್ ಬ್ಯಾನರ್ಗಳನ್ನು ಅಳವಡಿಸಲಾಗುತ್ತಿದ್ದು, ಅದನ್ನು ತೆಗೆಯದಂತೆ ಉಸ್ತುವಾರಿ ಸಚಿವರೇ ತಿಳಿಸಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ‘‘ನಾನೇ ಹೇಳಿದ್ದೇನೆ. ದಸರಾ ನಾಡಿನ ಹಬ್ಬ. ದಸರಾಕ್ಕಾಗಿ ಹಾಕುವ ಫ್ಲೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸದಂತೆ ತಿಳಿಸಿದ್ದೇನೆ. ರಾಜಕಾರಣಿಗಳ ಪೋಸ್ಟರ್ ತೆಗಿಸಿದರೆ ಪರವಾಗಿಲ್ಲ’’ ಎಂದರು.