ಪಡುಬಿದ್ರಿಯಲ್ಲಿ ಮೊಬೈಲ್, ಚಿನ್ನದ ಅಂಗಡಿ ಕಳವು: ಐವರ ಬಂಧನ
ಪಡುಬಿದ್ರಿ, ಅ. 8: ಕರ್ನಾಟಕ ಬ್ಯಾಂಕ್ನ ಭದ್ರತಾ ಸಿಬ್ಬಂದಿಯನ್ನು ಕಟ್ಟಿಹಾಕಿ ಚಿನ್ನದ ಅಂಗಡಿ ಹಾಗೂ ಮೊಬೈಲ್ ಅಂಗಡಿಗೆ ನುಗ್ಗಿ ಕಳವುಗೈದ ಸೆ.3ರ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಭಾಷ್ ಭೀಮರಾವ್ ಕಾಳೆ (26), ಶಂಕರ್ ಲಗಮನ್ ಕಾಳೆ (37), ಸುಭಾಷ್ ಭಾಸ್ಕರ ಕಾಳೆ (27), ಕಾಳಿದಾಸ ಭಾಸ್ಕರ ಕಾಳೆ (31), ಸುನೀಲ ನಾನಾ ಕಾಳೆ (27) ಬಂಧಿತರು. ಬಂಧಿತರಿಂದ ಆರು ಮೊಬೈಲ್ಗಳು ಹಾಗೂ ಕೃತ್ಯಕ್ಕೆ ಬಳಸಿದ ಚೂರಿಯನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳೆಲ್ಲ ಮಹಾರಾಷ್ಟ್ರದ ಉಸ್ಮನಾಬಾದ್ ಜಿಲ್ಲೆಯ ಕಲಾಂಬ್ ತಾಲ್ಲೂಕಿನವರಾಗಿದ್ದು, ಮಹಾರಾಷ್ಟ್ರದಿಂದ ಎರಡು ಲಾರಿಗಳಲ್ಲಿ ಸರಕು ಹೇರಿಕೊಂಡು ಬಂದು ಮಂಗಳೂರಿಗೆ ತಲುಪಿಸಿ ಹಿಂದಿರುಗುವ ವೇಳೆ ಈ ಕೃತ್ಯವೆಸಗಿದ್ದಾರೆ. ಆರೋಪಿಗಳಲ್ಲಿ ಶಂಕರ್ ಲಗಮನ್ ಕಾಳೆ ವಿರುದ್ಧ ಬೆಳಗಾವಿ ಜಿಲ್ಲೆಯ ಬಸವೇಶ್ವರ ಚೌಕಿ ಹಾಗೂ ಹುಬ್ಬಳ್ಳಿ ಠಾಣೆಗಳಲ್ಲಿ ಕಳವು ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಳಗಿನ ಪೇಟೆಯ ನಾರಾಯಣ ಆಚಾರ್ಯ ಎಂಬವರಿಗೆ ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್ಸ್ ಹಾಗೂ ಪಕ್ಕದ ಕಟ್ಟಡದ ರಾಜೇಶ್ ಎಂಬವರಿಗೆ ಸೇರಿದ ಎವರ್ಗ್ರೀನ್ ಮೊಬೈಲ್ಗಳನ್ನು ಕಳವುಗೈವುಗೈದಿದ್ದರು. ಕಳವುಗೈಯ್ಯುವ ಮುನ್ನ ಜುವೆಲ್ಲರಿ ಪಕ್ಕದಲಲ್ಲಿದ್ದ ಕರ್ನಾಟಕ ಬ್ಯಾಂಕ್ನ ಎಟಿಎಂನ ಭದ್ರತಾ ಸಿಬ್ಬಂದಿ ಲಕ್ಷ್ಮಣ್ ಅವರನ್ನು ಬಟ್ಟೆಯಲ್ಲಿ ಬಾಯಿ ಹಾಗೂ ಕೈಗಳನ್ನು ಕಟ್ಟಿ ಹಾಕಿ ಕಟ್ಟಡದ ಹಿಂಬದಿಯಲ್ಲಿರುವ ಪೊದೆಗೆ ಎಸೆದು ಹೋಗಿದ್ದರು.
ಆರೋಪಿಗಳು ಮಹಾರಾಷ್ಟ್ರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, ಪಡುಬಿದ್ರಿ ಎಸ್ಐ ಸತೀಶ್, ಸಿಬ್ಬಂದಿ ಸುಧಾಕರ್, ರಾಜೇಶ್, ಪ್ರವೀಣ್ಕುಮಾರ್ ಸಂಧೀಪ್, ಪ್ರಕಾಶ್ ಅವರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.