ಮಂಗಳೂರಿಗೆ ಹೆಚ್ಚುವರಿ ಭದ್ರತೆ: ರಾಜ್ಯದ ಪ್ರಥಮ ‘ಕ್ಷಿಪ್ರ ಕಾರ್ಯಪಡೆ ನೆಲೆ’ ಸ್ಥಾಪನೆ
ಮಂಗಳೂರು, ಅ.8: ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (ಕ್ಷಿಪ್ರ ಕಾರ್ಯಪಡೆ)ಯ ನೆಲೆಯು ಮಂಗಳೂರಿನಲ್ಲಿ ಸ್ಥಾಪನೆಗೊಳ್ಳುವ ಮೂಲಕ ಕಡಲ ನಗರವಾಗಿ ಗುರುತಿಸಿಕೊಂಡಿರುವ ಮಂಗಳೂರಿಗೆ ಹೆಚ್ಚುವರಿ ಭದ್ರತೆ ದೊರೆಯಲಿದೆ.
ರಾಜ್ಯದಲ್ಲಿಯೇ ಪ್ರಥಮವಾಗಿ ಮಂಗಳೂರಿನಲ್ಲಿ ಕ್ಷಿಪ್ರ ಕಾರ್ಯಪಡೆ ನೆಲೆ ಸ್ಥಾಪನೆಯಾಗಲಿದ್ದು, ಕೇಂದ್ರ ಸರಕಾರವು ಕಳೆದ ಜನವರಿಯಲ್ಲಿ ಆರ್ಎಎಫ್ನ ಐದು ಹೊಸ ಬೆಟಾಲಿಯನ್ಗಳಿಗೆ ಅನುಮೋದನೆ ನೀಡಿದೆ. ಮಂಗಳೂರಿನಲ್ಲಿಯೂ ಆರ್ಎಎಫ್ನ ಕಚೇರಿ ಸ್ಥಾಪನೆಗಾಗಿ ಜಾಗ ಗುರುತಿಸಿ ಎರಡು ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮಂಗಳೂರು ಮಾತ್ರವಲ್ಲದೆ, ವಾರಣಾಸಿ, ಜೈಪುರ, ಬಿಹಾರದ ಹಾಜೀಪುರ, ಹಾಗೂ ಹರಿಯಾಣದ ನುಹ್ನಲ್ಲಿ ಆರ್ಎಎಫ್ನ ನೆಲೆಗಳು ಸ್ಥಾಪನೆಯಾಗಲಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು 15 ಪ್ರದೇಶಗಳಲ್ಲಿ ಆರ್ಎಎಫ್ನ ನೆಲೆಗಳು ಸ್ಥಾಪನೆಯಾದಂತಾಗುತ್ತದೆ.
ಕೇಂದ್ರ ಮೀಸಲು ಪಡೆಯ ಭಾಗವಾಗಿರುವ ಆರ್ಎಎಫ್ನ ನೆಲೆಯಲ್ಲಿ ಒಂದು ಸಾವಿರ ಯೋಧರಿರುತ್ತಾರೆ. ಹಿಂಸಾಚಾರ, ಗುಂಪುಘರ್ಷಣೆಗಳ ನಿಯಂತ್ರಣ ಈ ಯೋಧರ ಪ್ರಮುಖ ಕಾರ್ಯ. ಇದಲ್ಲದೆ ಭೂಕಂಪ, ಪ್ರವಾಹ, ಚಂಡಮಾರುತ ಸಂದರ್ಭದಲ್ಲೂ ಈ ಪಡೆಯ ಯೋಧರು ಕಾರ್ಯಾಚರಣೆಗಿಳಿಯುತ್ತಾರೆ.
ಇತ್ತೀಚೆಗೆ ಕೊಡಗು ಹಾಗೂ ಕೇರಳದಲ್ಲಿ ಪ್ರವಾಹ ಸಂಭವಿಸಿದ ಸಂದರ್ಭದಲ್ಲೂ ಆರ್ಎಎಫ್ನ ಯೋಧರು ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.