ರಾಜ್ಯಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಟೇಬಲ್ಟೆನಿಸ್ ಟೂರ್ನಿ: ಬೆಂಗಳೂರು, ಉಡುಪಿ ತಂಡಗಳಿಗೆ ಅಗ್ರ ಪ್ರಶಸ್ತಿ
ಕಲ್ಯಾಣಪುರ, ಅ. 8: ಉಡುಪಿ ಜಿಪಂ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ವಲಯ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಟೇಬಲ್ ಟೆನಿಸ್ ಟೂರ್ನಿಯ 14 ವರ್ಷ ಕೆಳಗಿನ ಬಾಲಕರ ವಿಭಾಗದಲ್ಲಿ ಉಡುಪಿ ಜಿಲ್ಲೆ ಅಗ್ರಪ್ರಶಸ್ತಿಯನ್ನು ಗೆದ್ದುಕೊಂಡಿದೆ.
14 ವರ್ಷ ಕೆಳಗಿನ ಬಾಲಕರ ವಿಭಾಗದಲ್ಲಿ ಶಿರಸಿ ದ್ವಿತೀಯ, ಮೈಸೂರು ತೃತೀಯ, ಚಿಕ್ಕಮಗಳೂರು ನಾಲ್ಕನೆ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ಪ್ರಥಮ, ಬೆಂಗಳೂರು ದಕ್ಷಿಣ ದ್ವಿತೀಯ, ಬೆಳಗಾವಿ ತೃತೀಯ ಹಾಗೂ ಬಳ್ಳಾರಿ ನಾಲ್ಕನೆ ಸ್ಥಾನವನ್ನು ಪಡೆದುಕೊಂಡಿವೆ.
17 ವರ್ಷ ಕೆಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಪ್ರಥಮ, ಉಡುಪಿ ದ್ವಿತೀಯ, ಮೈಸೂರು ತೃತೀಯ, ಚಿಕ್ಕಮಗಳೂರು ನಾಲ್ಕನೆ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಪ್ರಥಮ, ಬೆಂಗಳೂರು ಉತ್ತರ ದ್ವಿತೀಯ, ಉಡುಪಿ ತೃತೀಯ, ಬಾಗಲಕೋಟೆ ನಾಲ್ಕನೆ ಸ್ಥಾನವನ್ನು ಪಡೆದು ಕೊಂಡವು.
ಕಲ್ಯಾಣಪುರದ ಮಿಲಾಗ್ರಿಸ್ ತ್ರಿಶತಮಾನೋತ್ಸವ ಸಭಾಭವನದಲ್ಲಿ ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸಾಧನೆಗೆ ವಯಸ್ಸು ಎಂಬುದು ಎಂದಿಗೂ ತೊಡಕಾಗಲ್ಲ. ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬೇಕಾದರೆ ಪ್ರತಿದಿನ ಎಂಟು ಗಂಟೆಗಳ ಕಾಲ ಅಭ್ಯಾಸ ಮಾಡ ಬೇಕಾಗುತ್ತದೆ. ನನ್ನ ಅವಧಿಯಲ್ಲಿ ಜಾರಿಗೆ ತಂದ ಸಹಸ್ರ ಕ್ರೀಡಾ ಪ್ರತಿಭಾ ಯೋಜನೆಗೆ ರಾಜ್ಯದಿಂದ 1000 ಕ್ರೀಡಾಪಟುಗನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಕಲ್ಯಾಣಪುರ ಮಿಲಾಗ್ರಿಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ಫಾ.ಡಾ.ಲಾರೆನ್ಸ್ ಡಿಸೋಜ ವಹಿಸಿದ್ದರು. ಈ ಸಂದರ್ಭದಲ್ಲಿ ಟೇಬಲ್ ಟೆನಿಸ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಗ್ರ ರ್ಯಾಂಕಿಂಗ್ ಕ್ರೀಡಾಪಟು ಅನರ್ಘ್ಯ ಮಂಜುನಾಥ್ ಅವರನ್ನು ನ್ಮಾನಿಸಲಾಯಿತು.
ಉಡುಪಿ ತಾಪಂ ಮಾಜಿ ಅಧ್ಯಕ್ಷ ವರೋನಿಕ ಕರ್ನೆಲಿಯೋ, ಕಲ್ಯಾಣಪುರ ರೋಟರಿ ಅಧ್ಯಕ್ಷ ಬ್ರಾಯೆನ್ ಡಿಸೋಜ, ಎಲ್ಐಸಿ ವಿಭಾಗೀಯ ಆಟೋಟ ಸಮಿತಿಯ ಕಾರ್ಯದರ್ಶಿ ಶೇಖರ್ ಪೂಜಾರಿ, ಮಿಲಾಗ್ರಿಸ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಡಾ.ನೇರಿ ಕರ್ನೆಲಿಯೋ, ಕಾರ್ಯದರ್ಶಿ ಫೆಲ್ಸಿಯಾನ ಲೂಯಿಸ್, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಜ್ಯೋತಿ ಲುವಿಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೆರಂಪಳ್ಳಿ, ಜ್ಯೋತಿಕಲಾ, ದತ್ತಾತ್ರೆಯ, ಸುದರ್ಶನ್, ಶೇಖರ್ ಪಿ., ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿನ್ಸೆಂಟ್ ಮಸ್ಕರೇನಸ್ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಮೀರಾ ಡಿಸಿಲ್ವ ಸ್ವಾಗತಿಸಿದರು. ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಧುಕರ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ರೆ.ಫಾ.ಲ್ಯಾನ್ಸಿ ಫೆರ್ನಾಂಡಿಸ್ ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
20 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ರಾಜ್ಯಮಟ್ಟದ ನಾಲ್ಕು ವಿಭಾಗಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಂದ ಐದು ಮಂದಿಯಂತೆ ಒಟ್ಟು 20 ಮಂದಿಯನ್ನು ಆಯ್ಕೆ ಮಾಡಿದ್ದು, ಇವರು ನವೆಂಬರ್ ತಿಂಗಳಲ್ಲಿ ಆಗ್ರಾದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
14 ವರ್ಷ ಕೆಳಗಿನ ಬಾಲಕಿಯರ ತಂಡಕ್ಕೆ ತೃಪ್ತಿ ಪ್ರವೀಣ್ ಬೆಂಗಳೂರು, ಭೂಮಿಕಾ ಎನ್. ಬೆಂಗಳೂರು, ತೀರ್ಥ ಎ. ಬೆಂಗಳೂರು, ಶ್ರೇಯ ರವಿ ಕುಮಾರ್ ಬೆಂಗಳೂರು, ಹರ್ಷಿಣಿ ಆರ್.ಹವಣೂರು ಬೆಂಗಳೂರು ಮತ್ತು ಬಾಲಕರ ತಂಡಕ್ಕೆ ಪಿಯುಷ್ ಉದಯ ಜಾದವ್ ಶಿರಸಿ, ಜೆರೋಮ್ ಲಿಯೋಡ್ ಉಡುಪಿ, ಆದಿತ್ಯ ಜಿ.ಕೋಟ್ಯಾನ್ ಉಡುಪಿ, ಕಿಶನ್ ಉಡುಪಿ, ಮಂಜುನಾಥ್ ಅಶೋಕ್ ಶಿರಸಿ ಇವರನ್ನು ಆಯ್ಕೆ ಮಾಡಲಾಗಿದೆ.
17 ವರ್ಷ ಕೆಳಗಿನ ಬಾಲಕಿಯರ ತಂಡಕ್ಕೆ ಅನರ್ಘ್ಯ ಮಂಜುನಾಥ್ ಬೆಂಗಳೂರು ದಕ್ಷಿಣ, ಅದಿತಿ ಪಿ.ಜೋಶಿ ಬೆಂಗಳೂರು ಉತ್ತರ, ದೃಷ್ಠಿ ಎಸ್. ಮೋರೆ ಬೆಂಗಳೂರು, ಕಲ್ಯಾಣಿ ಡಿ. ಬೆಂಗಳೂರು, ಅನನ್ಯ ಎಚ್.ಪಿ. ಬೆಂಗ ಳೂರು ಮತ್ತು ಬಾಲಕರ ತಂಡಕ್ಕೆ ಶ್ರೀಕಾಂತ್ ಕಶ್ಯಪ್ ಬೆಂಗಳೂರು, ಸುಜನ್ ಭಾರಧ್ವಾಜ್ ಬೆಂಗಳೂರು, ಆಕಾಶ್ ಕೆ.ಜೆ. ಬೆಂಗಳೂರು, ಸನ್ಮಾನ್ ಶಶಿಧರ್, ವಯನ್ ಥೋಮಸ್ ಉಡುಪಿ ಆಯ್ಕೆಯಾಗಿದ್ದಾರೆ.