ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ವಾರ್ಷಿಕ ಮಹಾಸಭೆ
ಉಡುಪಿ, ಅ.8: ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾ ಇದರ ವಾರ್ಷಿಕ ಮಹಾಸಭೆ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಸಭಾದ ಅಧ್ಯಕ್ಷ ಎಂ. ಮಂಜುನಾಥ ಉಪಾಧ್ಯ ವಹಿಸಿ ಎಲ್ಲ ಕ್ಷೇತ್ರದಲ್ಲಿಯೂ ವಿಪ್ರರು ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದು ಉತ್ತಮ ಸಾಧನೆ ಮಾಡುತಿದ್ದಾರೆ. ಆದರೆ ನಮ್ಮ ಸಮಾಜದಲ್ಲಿ ಉತ್ತಮ ಪ್ರತಿಭೆಯಿದ್ದು, ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅಂಥ ವರನ್ನು ಗುರುತಿಸಿ ಸಂಘಟನೆ ಮುಖಾಂತರ ಅವರನ್ನು ಮೇಲೆತ್ತುವ ಕಾರ್ಯ ಆಗಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ನಮ್ಮ ಸಮಾಜ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಿಗೂ ತನ್ನ ಪೂರ್ಣ ಸಹಕಾರವಿದ್ದು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿ ಗುರುತಿಸಿ ಕೊಂಡಂತೆ ರಾಜಕೀಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳೇಕು ಎಂದು ಕಿವಿಮಾತು ಹೇಳಿದರು.
ವಿಪ್ರ ಸಮಾಜದ ಸಾಧಕರಾದ ನೇತ್ರತಜ್ಞೆ ಡಾ.ರೂಪಶ್ರೀ, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ವೈ.ಎನ್.ಪ್ರಕಾಶ ರಾವ್ ಹಾಗೂ ಉಡುಪಿ ನಗರಸಭೆಯ ನೂತನ ಸದಸ್ಯ ಕೃಷ್ಣರಾವ್ ಕೊಡಂಚ, ಶ್ರೀಶ ಭಟ್ ಕೊಡವೂರು,ಅಮೃತ ಕೃಷ್ಣಮೂರ್ತಿ ಇವರನ್ನು ಸನ್ಮಾನಿಸಲಾಯಿತು.
ವಾರ್ಷಿಕ ಮಹಾಸಭೆಯಲ್ಲಿ ಕಳೆದ ಬಾರಿಯ ಕಾರ್ಯಕಾರಿ ಸಮಿತಿಯನ್ನೆ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಮಂಜುನಾಥ ಉಪಾಧ್ಯ ಸ್ವಾಗತಿಸಿದರೆ, ಕುದಿ ಶ್ರೀನಿವಾಸ ಭಟ್ ವಂದಿಸಿದರು. ಎಂ.ಶ್ರೀನಿವಾಸ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.