‘ಗ್ರಾಪಂಗಳಿಗೆ ಅನುದಾನ ಬಿಡುಗಡೆ: ಉಡುಪಿ ಜಿಲ್ಲೆಗೆ ಅನ್ಯಾಯ’
ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಸಮಿತಿ ಆರೋಪ
ಉಡುಪಿ, ಅ.8: 2018-19ನೇ ಸಾಲಿನಲ್ಲಿ ಗ್ರಾಮ ಪಂಚಾಯತ್ಗಳಿಗೆ ಎರಡನೇ ತ್ರೈಮಾಸಿಕ ಕಂತಿನಲ್ಲಿ ರಾಜ್ಯ ಸರಕಾರ ಸರಕಾರ ಸೆ.17ರ ಅದೇಶದಂತೆ ಬಿಡುಗಡೆ ಮಾಡಿದ ಶಾಸನಬಧ್ಧ ಅನುದಾನದಲ್ಲಿ ಉಡುಪಿ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಉದಯ ಶೆಟ್ಟಿ ಪೆರ್ಡೂರು ಹೇಳಿಕೆಯಲ್ಲಿ ದೂರಿದ್ದಾರೆ.
ಗ್ರಾಪಂಗಳಿಗೆ ಸಿಬ್ಬಂದಿ ವೇತನ ಪಾವತಿಸಲು, 96 ಗ್ರಾಪಂಗಳನ್ನು ಹೊಂದಿ ರುವ ಬೆಂಗಳೂರು ನಗರಕ್ಕೆ 3.01 ಕೋಟಿ, 105 ಗ್ರಾಪಂಗಳನ್ನು ಹೊಂದಿರುವ ಬೆಂಗಳೂರು(ಗ್ರಾಮೀಣ)ಕ್ಕೆ 2.47 ಕೋಟಿ, 130 ಗ್ರಾಪಂಗಳನ್ನು ಹೊಂದಿರುವ ಚಾಮರಾಜನಗರಕ್ಕೆ 4.03 ಕೋಟಿ, 157 ಗ್ರಾಪಂಗಳನ್ನು ಹೊಂದಿರುವ ಚಿಕ್ಕಬಳ್ಳಾಪುರಕ್ಕೆ 4.85 ಕೋಟಿ, 144 ಗ್ರಾಪಂಗಳನ್ನು ಹೊಂದಿರುವ ಧಾರವಾಡಕ್ಕೆ 3.07 ಕೋಟಿ, 122 ಗ್ರಾಪಂಗಳನ್ನು ಹೊಂದಿರುವ ಗದಗಿಗೆ 2.45 ಕೋಟಿ, 104 ಗ್ರಾಪಂಗಳನ್ನು ಹೊಂದಿರುವ ಕೊಡಗುಗೆ 1.40 ಕೋಟಿ, 127 ಗ್ರಾಪಂಗಳನ್ನು ಹೊಂದಿರುವ ಕೋಲಾರಕ್ಕೆ 5.75 ಕೋಟಿ, 153 ಗ್ರಾಪಂ ಗಳನ್ನು ಹೊಂದಿರುವ ಕೊಪ್ಪಳಕ್ಕೆ 3.69 ಕೋಟಿ, 127 ಗ್ರಾಪಂಗಳನ್ನು ಹೊಂದಿರುವ ರಾಮನಗರಕ್ಕೆ 4.33 ಕೋಟಿ ಹಾಗೂ 123 ಗ್ರಾಪಂಗಳನ್ನು ಹೊಂದಿರುವ ಯಾದಗಿರಿಗೆ 3.63 ಕೋಟಿ ಅನುದಾನವನ್ನು ಸರಕಾರ ನೀಡಿದೆ ಎಂದವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಆದರೇ ಉಡುಪಿ ಜಿಲ್ಲೆಯಲ್ಲಿ 158 ಗ್ರಾಪಂಗಳನ್ನು ಹೊಂದಿದ್ದರೂ ಇಲ್ಲಿನ ಗ್ರಾಪಂ ನೌಕರರ ವೇತನ ಪಾವತಿಗೆ ಕೇವಲ 0.70 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಿಂದ ಇಡೀ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ತೆರಿಗೆ ವಸೂಲಿಯಲ್ಲಿ ರಾಜ್ಯಕ್ಕೆ ಮಾದರಿ ಯಾಗಿರುವ ಉಡುಪಿ ಗ್ರಾಪಂಗಳ ನೌಕರರಿಗೆ ಅನ್ಯಾಯ ಮಾಡಲಾಗಿದೆ ಎಂದವರು ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯ ಗ್ರಾಪಂ ಸಿಬ್ಬಂದಿಗಳು ಹಾಗೂ ನೌಕರರು ಎಲ್ಲಾ ಕೆಲಸಗಳನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ನಿರ್ವಹಿಸುತ್ತಿದ್ದು, ಇತರ ಜಿಲ್ಲೆಗಳಲ್ಲಿ ರುವಂತೆ ನಮ್ಮ ಉಡುಪಿ ಜಿಲ್ಲೆಯ ಗ್ರಾಪಂ ಕಚೇರಿಗಳಿಗೆ 20ರಿಂದ 30 ಸಿಬ್ಬಂದಿ ಗಳನ್ನು ನೀಡಬೇಕು ಮತ್ತು ಅವರೆಲ್ಲರಿಗೂ ಕೂಡ ಸರಕಾರದಿಂದಲೇ ವೇತನಕ್ಕೆ ಅನುದಾನ ನೀಡಬೇಕು ಎಂದೂ ಒತ್ತಾಯಿಸುತ್ತೇವೆ ಎಂದರು.
ಇತರ ಜಿಲ್ಲೆಗಳಲ್ಲಿ ವಾಟರ್ಮನ್, ಪಂಪುಚಾಲಕರನ್ನು ಪ್ರತಿ ನೀರು ಸರಬರಾಜು ಘಟಕಕ್ಕೆ ಒಬ್ಬರಂತೆ ನಿಯೋಜಿಸಿದಂತೆ ನಮ್ಮ ಜಿಲ್ಲೆಯಲ್ಲಿಯೂ ಕೂಡ ಸರಕಾರ ಅವಕಾಶ ಮಾಡಿ ನೀಡಬೇಕು. ಪ್ರತಿ ಗ್ರಾಪಂಗೂ ಇತರ ಜಿಲ್ಲೆಗಳಂತೆ ಎರಡಕ್ಕಿಂತ ಹೆಚ್ಚು ಶುಚಿತ್ವ ನೌಕರರನ್ನು ನೇಮಕ ಮಾಡಲು ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಪಂಗಳಿಗೂ ಇತರ ಜಿಲ್ಲೆಯಲ್ಲಿರುವಂತೆ 2-3 ಬಿಲ್ ಕಲೆಕ್ಟರ್ ಹಾಗೂ ಡಾಟಾಎಂಟ್ರೀ ಅಪರೇಟರ್ಗಳನ್ನು ನಿಯೋಜನೆ ಮಾಡಲು ಅವಕಾಶ ನೀಡಬೇಕು ಹಾಗೂ ಅವರಿಗೆಲ್ಲರಿಗೂ ವೇತನವನ್ನು ನೀಡಬೇಕು. ಸರಕಾರ ಇತರ ಜಿಲ್ಲೆಗಳಿಗೆ ಅನುದಾನ ನೀಡಿದಂತೆ ಉಡುಪಿ ಜಿಲ್ಲೆಗೂ ಅನುದಾನ ನೀಡಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.
ಉಡುಪಿ ಜಿಲ್ಲೆಯ ನಾಲ್ಕು ಮತ್ತು ಐದು ಜನ ಸಿಬ್ಬಂದಿಗಳಿರುವ ಗ್ರಾಪಂ ಗಳಿಗೆ ಮೇಲಿನ ಆದೇಶದಂತೆ 6,000ದಿಂದ 8,000ರೂ. ಅನುದಾನ ಜಮೆ ಯಾಗಿದ್ದು, ಇದರಿಂದ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಸಾಧ್ಯವಿಲ್ಲ. ಆದರೆ ಅದೇ ಬೇರೆ ಜಿಲ್ಲೆಗಳ ಕೆಲ ಗ್ರಾಪಂಗಳಿಗೆ 8,00,000ರೂ.ಗೂಅಧಿಕ ಅನುದಾನ ಜಮೆ ಆಗಿದೆ. ಇದು ತೀರಾ ತಾರತಮ್ಯದ ನೀತಿಯಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗಾದರೇ ಉಡುಪಿ ಜಿಲ್ಲೆಯ ನೌಕರಿಗೊಂದು ನ್ಯಾಯ, ಇತರ ಜಿಲ್ಲೆಯ ನೌಕರರಿಗೊಂದು ನ್ಯಾಯವನ್ನು ಅನುಸರಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ ಉದಯ ಶೆಟ್ಟಿ, ಗ್ರಾಪಂ ಸಿಬ್ಬಂದಿಗಳ ನೇಮಕಾತಿಗೆ ಗ್ರಾಪಂ ಆದಾಯದ ಶೇ. 40ರೊಳಗೆ ಇರಬೇಕು ಎಂಬ ನಿಯಮ ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವೇ ಎಂದವರು ಸರಕಾರವನ್ನು ಪ್ರಶ್ನಿಸಿದ್ದಾರೆ.
ದಯವಿಟ್ಟು ಗ್ರಾಪಂ ನೌಕರನ್ನೂ ಕೂಡ ಇತರ ನೌಕರರಂತೆ ಬದುಕಲು ಅವಕಾಶ ಮಾಡಿ ಕೊಡಿ. ಗ್ರಾಪಂ ನೌಕರರಿಗೆ ಇನ್ನಾದರೂ ಸರಕಾರ ಸಿ ಮತ್ತು ಡಿ ದರ್ಜೆ ನೌಕರರೆಂದು ಮೇಲ್ದರ್ಜೆಗೆ ಏರಿಸಲಿ. ಪ್ರಸ್ತುತ ಗ್ರಾಪಂ ಕಚೇರಿಯಲ್ಲಿ 10-20 ವರ್ಷ ಸೇವೆಯನ್ನು ಹೊಂದಿರುವ ಸಿಬ್ಬಂದಿಗೆ ಮತ್ತು ಇತ್ತೀಚೆಗೆ ಸೇರಿದ ನೌಕರನಿಗೂ ಒಂದೇ ಮಾಸಿಕ ವೇತನ ನಿಗದಿಪಡಿಸಿದ್ದು ಇದನ್ನೂ ಸರಕಾರ ಆದಷ್ಟೂ ಬೇಗ ಸರಿಪಡಿಸಬೇಕು ಎಂದು ಉದಯ ಶೆಟ್ಟಿ ಪೆರ್ಡೂರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.