ಬಂದರು ದಕ್ಕೆಯ 3ನೆ ಹಂತದ ಜೆಟ್ಟಿ ಕಾಮಗಾರಿ ಸಚಿವ ಖಾದರ್ ವೀಕ್ಷಣೆ
ಮಂಗಳೂರು, ಅ.8: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೋಮವಾರ ನಗರದ ಮೀನುಗಾರಿಕಾ ದಕ್ಕೆಯ ಮೂರನೇ ಹಂತದ ಜೆಟ್ಟಿಯ ಅಪೂರ್ಣ ಕಾಮಗಾರಿಯನ್ನು ವೀಕ್ಷಿಸಿ, ಮೀನುಗಾರ ಮುಖಂಡರು ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಮೂರನೇ ಹಂತದ ಜೆಟ್ಟಿ ನಿರ್ಮಾಣವು ಆರಂಭದಲ್ಲಿ ವಿನ್ಯಾಸದ ವ್ಯತ್ಯಾಸ, ನಂತರ ಎರಡು ವರ್ಷ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರಿಂದ ವಿಳಂಬವಾಗಿತ್ತು. ಇದೀಗ ಅನುದಾನ ಬಿಡುಗಡೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾಲು ವಿಂಗಡಣೆ ಸಮಸ್ಯೆಯಿಂದ ಕಾಮಗಾರಿ ಮುಗಿಯುತ್ತಿಲ್ಲ ಎಂದು ಮೀನುಗಾರರು ಸಮಸ್ಯೆ ತೋಡಿಕೊಂಡರು.
ಈಗಾಗಲೇ ಲೆಕ್ಕಕ್ಕಿಂತ ಹೆಚ್ಚು ಬೋಟುಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಹಾಗಾಗಿ ಬೋಟುಗಳ ಲಂಗರಿಗೆ ಜಾಗದ ಸಮಸ್ಯೆಯೂ ಆಗಿದೆ. ಜೆಟ್ಟಿಗೆ ಬರುವ ರಸ್ತೆಯೂ ಸರಿ ಇಲ್ಲ. ಎಲ್ಲೆಡೆ ಕೊಳಚೆ ಇದೆ. ಸರಿಯಾದ ಮೂಲಸೌಲಭ್ಯವೂ ಇಲ್ಲ. ಹಾಗಾಗಿ ಶೀಘ್ರ ಉತ್ತಮ ರೀತಿಯಲ್ಲಿ ಸೌಲಭ್ಯ ಕಲ್ಪಿಸಿಕೊಡುವಂತೆ ಮೀನುಗಾರರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಮೀನುಗಾರಿಕೆ ಜೆಟ್ಟಿ ಹಾಗೂ ಈ ಪ್ರದೇಶದ ಅಭಿವೃದ್ಧಿಗೆ ಮೀನುಗಾರರ ಸಹಕಾರದ ಅಗತ್ಯವಿದೆ. ರಸ್ತೆ ಬದಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಡಬಾರದು. ಎರಡನೇ ಹಾಗೂ ಮೂರನೇ ಹಂತದ ಜೆಟ್ಟಿಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದ ಸಚಿವ ಖಾದರ್ ಮೂರನೇ ಹಂತದ ಯೋಜನೆಯನ್ನು ತಾತ್ಕಾಲಿಕವಾಗಿ ಕಾಮಗಾರಿ ಪೂರ್ಣಗೊಳಿಸಲು 4.5 ಕೋ.ರೂ. ಮೊತ್ತದ ಯೋಜನೆ ರೂಪಿಸಿ ಸರಕಾರಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ರಿಗೆ ಸೂಚಿಸಿದರು. ಅಲ್ಲದೆ ಎರಡೂ ಜೆಟ್ಟಿಗಳ ಸಮಗ್ರ ಅಭಿವೃದ್ಧಿಯ ರೂಪುರೇಷೆ ಸಿದ್ಧಪಡಿಸಿ ಅದನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರಿಸಿ ಅಭಿವೃದ್ಧಿಪಡಿಸಲು ಸಿದ್ಧತೆ ಮಾಡಿಕೊಳ್ಳಲು ತಿಳಿಸಿದರು.
ಈ ಸಂದರ್ಭ ಮೀನುಗಾರರ ಮುಖಂಡರಾದ ನಿತಿನ್ ಕುಮಾರ್, ಮೋಹನ್ ಬೆಂಗರೆ, ಚೇತನ್ ಬೆಂಗರೆ, ಮನೋಹರ್ ಬೋಳೂರು, ರಾಜೇಶ್ ಉಳ್ಳಾಲ್, ಬಾಬು ಉಳ್ಳಾಲ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್., ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಚಿಕ್ಕವೀರ ನಾಯಕ್, ಇಬ್ರಾಹಿಂ ಬೆಂಗರೆ, ಸಿಆರ್ಝೆಡ್ ಅಧಿಕಾರಿ ಮಹೇಶ್, ಬಂದರು ಸಹಾಯಕ ಇಂಜಿನಿಯರ್ ಮನೋಹರ್ ಮತ್ತಿತರರಿದ್ದರು.