ಶಾಲೆಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ಇರಲಿ: ವಂ. ವಿಜಯ ಹಾರ್ವಿನ್
ಮಂಗಳೂರು, ಅ. 9: ಶಾಲೆಗಳು ಮಕ್ಕಳನ್ನು ಅಂಕ ಪಡೆಯಲು ತಯಾರು ಮಾಡುವ ಕೇಂದ್ರಗಳು ಆಗಬಾರದು. ದೇಶದ ವಿಷ್ಯದ ದೃಷ್ಟಿಯಿಂದ ಅವರ ವ್ಯಕ್ತಿತ್ವ ವಿಕಸನದ ಕಡೆಗೆ ಗಮನ ನೀಡಬೇಕು. ವ್ಯಕ್ತಿತ್ವದ ವಿಕಸನವಾದಾಗ ಮಾತ್ರ ಸವಾಜ ಬದಲಾವಣೆಯಾಗಬಹುದು ಎಂದು ಪುತ್ತೂರು ಸುದಾನ ವಸತಿ ಶಾಲೆಯ ಸಂಚಾಲಕರಾದ ವಂ. ವಿಜಯ ಹಾರ್ವಿನ್ ಅಭಿಪ್ರಾಯಿಸಿದರು.
ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಇಂದು ಆಯೋಜಿಸಲಾಗಿರುವ ಶಕ್ತಿ ಕ್ಯಾನ್ ಕ್ರಿಯೇಟ್ ದಸರಾ ರಜಾಕಾಲದ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಶಿವರಾಮ ಕಾರಂತರ ನಲಿ - ಕಲಿ ಕಲ್ಪನೆಯು ಇಂದಿನ ಕಾಲಕ್ಕೆ ಪ್ರಸ್ತುತವಾಗಿದೆ ಎಂದು ಹೇಳಿದ ಅವರು, ಪೋಷಕರು ಮತ್ತುಅಧ್ಯಾಪಕರು ಮಕ್ಕಳ ಪ್ರತಿಭೆಯನ್ನು ಗುರುತಿಸುವ ಮಹತ್ತರವಾದ ಕಾರ್ಯವನ್ನು ಮಾಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮನಪಾ ಸದಸ್ಯೆ ಅಖಿಲಾ ಆಳ್ವ ಮಕ್ಕಳಿಗೆ ಟಿ.ವಿ ಹಾಗೂ ಇನ್ನಿತರ ಮಾಧ್ಯಮದಿಂದ ಸಿಗುವುದಕ್ಕಿಂತ ಹೆಚ್ಚಿನ ಅನುಭವ ಇಂತಹ ಶಿಬಿರದಿಂದ ಲಭಿಸುತ್ತದೆ. ಇಂತಹ ಶಿಬಿರದ ಉಪಯೋಗವನ್ನು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೋಸ್ಕರ ಉಪಯೋಗಿಸಿಕೊಳ್ಳಬೇಕು. ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳಿಂದ ಒಳ್ಳೆಯ ವಿಚಾರಗಳು ಮಕ್ಕಳಿಗೆ ಪ್ರಯೋಜನವಾಗಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ವೊಕ್ತೇಸರ ಕೆ.ಸಿ ನಾಕ್ ವಹಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ಸಗುಣ ಸಿ. ನಾಕ್, ಪ್ರಧಾನ ಸಲಹೆಗಾರ ರಮೇಶ.ಕೆ, ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು ಮತ್ತು ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಬಾಕರ ಜಿ.ಎಸ್ ಸ್ವಾಗತಿಸಿದರು. ಕಾಲೇಜಿ ಉಪನ್ಯಾಸಕಿ ಶಶಿಕಲಾ ವಂದಿಸಿದರು.