'ರಾಷ್ಟ್ರೀಕೃತ ಬ್ಯಾಂಕ್ಗಳ ವಿಲೀನ ಬ್ಯಾಂಕ್ ವ್ಯವಸ್ಥೆಗೆ ಮಾರಕ'
ಮಂಗಳೂರಿನಲ್ಲಿ ಬ್ಯಾಂಕ್ ನೌಕರರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
ಮಂಗಳೂರು, ಅ. 9: ರಾಷ್ಟ್ರೀಕೃತ ಬ್ಯಾಂಕ್ಗಳ ವಿಲೀನದಿಂದ ಬ್ಯಾಂಕ್ಗಳಿಗೆ ನಷ್ಟವಾಗಲಿದೆ. ವಿಲೀನದಿಂದ ಬ್ಯಾಂಕ್ ಬಲಗೊಳ್ಳುತ್ತದೆ ಎನ್ನುವುದಕ್ಕೆ ಯಾವ ಸಾಕ್ಷ್ಯವೂ ಇಲ್ಲ ಎಂದು ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆಯ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಯುಎಫ್ಬಿಯು ದ.ಕ ಜಿಲ್ಲಾ ಸಂಚಾಲಕ ವಿನ್ಸೆಂಟ್ ಡಿ ಸೋಜ ತಿಳಿಸಿದ್ದಾರೆ.
ಅವರು ನಗರದ ಬಲ್ಮಠ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಎದುರು ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆಯ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಷ್ಟ್ರೀಕೃತ ಬ್ಯಾಂಕ್ಗಳ ಪೈಕಿ ಪ್ರಥಮವಾಗಿ ಎಸ್ಬಿಐಯ 5 ಬ್ಯಾಂಕ್ಗಳನ್ನು ಪ್ರಥಮ ಬಾರಿಗೆ ವಿಲೀನಗೊಳಿಸಲಾಯಿತು. ಆದರೆ ಇದರಿಂದ ಎಸ್ಬಿಐ ತನ್ನ 200 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಷ್ಟ ಹೊಂದುವ ಪರಿಸ್ಥಿತಿ ನಿರ್ಮಾಣವಾಯಿತು. ಪ್ರಸಕ್ತ ದೇಶದಲ್ಲಿ ತನ್ನದೇ ಇತಿಹಾಸವನ್ನು ಸೃಷ್ಟಿಸಿ ಉತ್ತಮ ರೀತಿಯಲ್ಲಿ ಪ್ರಗತಿ ಪಥದಲ್ಲಿರುವ ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೊಡಾ, ದೇನಾ ಬ್ಯಾಂಕ್ನ್ನು ವಿಲೀನಗೊಳಿಸಲು ಹೊರಟಿರುವ ಕೇಂದ್ರ ಸರಕಾರದ ತೀರ್ಮಾನವನ್ನು ವಿರೋಧಿಸುವುದಾಗಿ ವಿನ್ಸೆಂಟ್ ಡಿ ಸೋಜ ತಿಳಿಸಿದ್ದಾರೆ.
ಮಲ್ಯ, ನೀರವ್ ಮೋದಿ ವಿರುದ್ಧ ಏಕೆ ಕ್ರಮ ಕೈ ಗೊಂಡಿಲ್ಲಾ ?
ಬ್ಯಾಂಕ್ಗಳಲ್ಲಿ ಮಲ್ಯ, ನೀರವ್ ಮೋದಿ ಮೊದಲಾದವರು ವಿನ್ಸಮ್ ಡಯಮಂಡ್, ವಿಡಿಯೊಕಾನ್ ಮೊದಲಾದ ಸಂಸ್ಥೆಗಳ ಮಾಲಕರು ಬ್ಯಾಂಕ್ಗಳ ಮೂಲಕ ಪಡೆದ ಸಾಲ ಮರುಪಾವತಿಸದೆ ಕೊಟ್ಯಾಂತರ ರೂ. ನಷ್ಟ ಹೊಂದಲು ಕಾರಣರಾಗಿದ್ದಾರೆ. ಅವರ ಮೇಲೆ ವಸೂಲಾತಿಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಬ್ಯಾಂಕ್ಗಳಲ್ಲಿ ಮರುಪಾವತಿಯಾಗದ ಸಾಲದ ಪ್ರಮಾಣ ಹೆಚ್ಚುತ್ತಿದೆ. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳುವ ಬದಲು ರಾಷ್ಟ್ರೀಕೃತ ಬ್ಯಾಂಕ್ಗಳನ್ನು ವಿಲೀನಗೊಳಿಸಲು ಹೊರಟಿರುವ ತೀರ್ಮಾನ ಬ್ಯಾಂಕ್ಗಳಿಗೆ ಮಾರಕವಾಗಲಿದೆ. ಈ ರೀತಿಯ ವಿಲೀನದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿನ್ಸೆಂಟ್ ಡಿ ಸೋಜ ತಿಳಿಸಿದ್ದಾರೆ.
ಪ್ರತಿಭಟನಾ ಪ್ರದರ್ಶನದಲ್ಲಿ ಏಕನಾಥ ಬಾಳಿಗ ಹಾಗೂ ವಿವಿಧ ಬ್ಯಾಂಕ್ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.