‘ಗಿಡ ನೆಡಿ, ಪ್ರವಾಹ ತಡೆಯಿರಿ’ ಜಾಗೃತಿಗಾಗಿ 3 ಬೈಕ್ ರೈಡರ್ಗಳಿಂದ 3 ದೇಶಗಳ ಸಂಚಾರ
30 ದಿನಗಳಲ್ಲಿ 12000 ಕಿ.ಮೀ. ಪ್ರಯಾಣ
ಮಂಗಳೂರು, ಅ.10: ಕರ್ನಾಟಕದ ಕೊಡಗು ಹಾಗೂ ಕೇರಳ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಜಲ ಪ್ರಳಯ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಎಚ್ಚರಿಕೆಯನ್ನು ಈಗಾಗಲೇ ನೀಡಿದೆ. ಈ ಎಚ್ಚರಿಕೆಯು ಹಲವು ರೀತಿಯ ಪರಿಸರ ಸಂರಕ್ಷತಾ ಕಾರ್ಯಗಳಿಗೂ ಪ್ರೇರಣೆ ನೀಡಿದ್ದು, ಕೇರಳದ ಮೂವರು ಯುವ ಬೈಕ್ ರೈಡರ್ಗಳು ತಮ್ಮ ಹವ್ಯಾಸವನ್ನು ಜಾಗೃತಿ ಪಯಣವನ್ನಾಗಿಸಲು ಮುಂದಾಗಿದ್ದಾರೆ.
ಕೇರಳ ಕಾಸರಗೋಡಿನ ಯುವಕರಾದ ಸುಧೀರ್ ಕುಮಾರ್, ಶಾನ್ ಕಲ್ಲಂಗಡಿ, ಸಹೀರ್ ಕುಂಬಳೆ ಅವರು ಕೇರಳದ ಕಾಸರಗೋಡಿನಿಂದ 12,000 ಕಿ.ಮೀ. ಪ್ರಯಾಣದ ಮೂಲಕ ‘ಗಿಡ ನೆಡಿ ಪ್ರವಾಹ ತಡೆಯಿರಿ’ ಎಂಬ ಜಾಗೃತಿ ಸಂದೇಶದೊಂದಿಗೆ ಭಾರತ ಸೇರಿ ಮೂರು ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಸುಧೀರ್ ಕುಮಾರ್ ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದು, ಶಾನ್ ಕಲ್ಲಂಗಡಿ ಉದ್ಯಮಿ ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಶಮೀರ್ ಕುಂಬಳೆ ಪ್ರಸ್ತುತ ಉದ್ಯಮಿಯಾಗಿದ್ದಾರೆ.
ಮಂಗಳೂರು ಬುಲ್ಸ್ ಮೊಟಾರ್ ಸೈಕಲ್ ಕ್ಲಬ್ ಸದಸ್ಯರಾಗಿರುವ ಈ ಮೂವರು ಕೂಡಾ ರಾಯಲ್ ಎನ್ಫೀಲ್ಡ್ ಕಂಪನಿಯ ಹಿಮಾಲಯನ್ ಬೈಕ್ಗಳಲ್ಲಿ ಕಾಸರಗೋಡಿನಿಂದ ಪ್ರಯಾಣ ಆರಂಭಿಸಿದ್ದಾರೆ. ಬೈಕ್ ರೈಡಿಂಗ್ ಈ ಮೂವರ ಹವ್ಯಾಸವಾಗಿದ್ದು, ಅದನ್ನೀಗ ಪರಿಸರ ಅದರಲ್ಲೂ ಮುಖ್ಯವಾಗಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕೆಂಬ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ತಮ್ಮ ಪ್ರಯಾಣದ ವೇಳೆ ಈ ಬೈಕ್ ರೈಡರ್ಗಳು ಮಾಡಲಿದ್ದಾರೆ.
ತಮ್ಮ ಪ್ರಯಾಣದ ವೇಳೆ ಈ ಬೈಕ್ ರೈಡರ್ಗಳು ಭಾರತದ 14 ರಾಜ್ಯಗಳು (ಕರ್ನಾಟಕ, ಕೇರಳ ಸೇರಿ) ಸೇರಿದಂತೆ ನೇಪಾಲ ಹಾಗೂ ಭೂತನ್ ದೇಶದ ಕೆಲ ನಗರಗಳಿಗೂ ಪ್ರಯಾಣ ಬೆಳೆಸಲಿದ್ದಾರೆ.
ಕಾಸರಗೋಡಿನಿಂದ ಇಂದು ಸಂಜೆ 4 ಗಂಟೆಗೆ ಪ್ರಯಾಣ ಆರಂಭಿಸಿರುವ ಈ ಯುವಕರು ಅ. 11ರಂದು ಬೆಳಗ್ಗೆ ಮಂಗಳೂರು ತಲುಪಲಿದ್ದಾರೆ. ನಗರದ ಪೊಲೀಸ್ ಆಯುಕ್ತರ ಕಚೇರಿ ಬಳಿಯಿಂದ ಬೆಳಗ್ಗೆ 10 ಗಂಟೆಗೆ ಗೋವಾ ಆಗಿ. 30 ದಿನಗಳ ಪ್ರಯಾಣವನ್ನು ಮುಂದುವರಿಸಲಿದ್ದಾರೆ.
ಗಿಡಗಳನ್ನು ನೆಡುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಯಲು ಸಾಧ್ಯ. ಹಾಗಾಗಿ ಆದಷ್ಟು ಗಿಡಗಳನ್ನು ನೆಡುವುದಕ್ಕೆ ಆದ್ಯತೆ ನೀಡಬೇಕೆಂಬ ಸಂದೇಶವನ್ನು ಈ ಬೈಕ್ ರೈಡರ್ಗಳು ತಮ್ಮ ಪ್ರಯಾಣದುದ್ದಕ್ಕೂ ಮನವರಿಕೆ ಮಾಡಲಿದ್ದಾರೆ.
ಅ.11ರಂದು ಮಂಗಳೂರಿನಿಂದ ಕರ್ನಾಟಕ ರಾಜ್ಯದ ಪ್ರವಾಸವನ್ನು ಈ ರೈಡರ್ಗಳು ಆರಂಭಿಸಲಿದ್ದಾರೆ. ಜಿಲ್ಲಾಡಳಿತಕ್ಕೆ ಹಸಿರು ಪತಾಕೆಯನ್ನು ಹಸ್ತಾಂತರ ಮಾಡುವ ಮೂಲಕ ಪ್ರಯಾಣ ಮುಂದುವರಿಸುವರು ಎಂದು ಮಂಗಳೂರು ಬುಲ್ಸ್ ಮೊಟಾರು ಸೈಕಲ್ ಕ್ಲಬ್ನ ಅಶ್ವಿತ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.