ಕಾರಂತ ಹುಟ್ಟುಹಬ್ಬ; ಕಲ್ಕೂರ ಪ್ರತಿಷ್ಠಾನದಿಂದ ಸಾಧಕರಿಗೆ ಪ್ರಶಸ್ತಿ ಪ್ರದಾನ
ಬಿ.ಎ. ಸನದಿಗೆ ಕಾರಂತ ಪ್ರಶಸ್ತಿ ಘೋಷಣೆ
ಮಂಗಳೂರು, ಅ.10: ದ.ಕ. ಜಿಲ್ಲಾ ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಕೂರ ಪ್ರತಿಷ್ಠಾನಗಳ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ 116ನೇ ಕಾರಂತ ಹುಟ್ಟುಹಬ್ಬ ಪ್ರಯುಕ್ತ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಬಿ.ಎ.ಸನದಿ (ಬಾಬಾಸಾಹೇಬ ಅಹ್ಮದ್ಸಾಹೇಬ ಸನದಿ) ಅವರಿಗೆ ‘ಕಾರಂತ ಪ್ರಶಸ್ತಿ’ಯನ್ನು ಘೋಷಣೆ ಮಾಡಲಾಯಿತು.
ಕಾರಂತ ಹುಟ್ಟುಹಬ್ಬ ಪ್ರಯುಕ್ತ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮನಪಾ ಮೇಯರ್ ಭಾಸ್ಕರ್ ಕೆ. ಉದ್ಘಾಟಿಸಿ, ಡಾ.ಶಿವರಾಮ ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೊಳ್ಪಡಿತ್ತಾಯ ಅವರಿಗೆ ‘ಕಲ್ಕೂರ ಸಾಧನಾ ಪ್ರಶಸ್ತಿ’, ಎಕ್ಕಾರು ಕನ್ನಡ ಪ್ರಾಧ್ಯಾಪಕ ಡಾ.ಎಸ್.ಪದ್ಮನಾಭ ಭಟ್, ಸಾಲಿಗ್ರಾಮ ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ, ಚಿತ್ರಕಲಾ ಶಿಕ್ಷಕ ತಾರನಾಥ ಕೈರಂಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾಕರ್ ಅವರಿಗೆ ‘ಕಲ್ಕೂರ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ವಿಶೇಷ ಚೇತನ ರಾಷ್ಟ್ರ ಮಟ್ಟದ ಚೆಸ್ ಆಟಗಾರ್ತಿ ಯಶಸ್ವಿ ಕೆ. ಹಾಗೂ ರಾಷ್ಟ್ರ ಮಟ್ಟದ ತಬಲ ಸಾಧಕ ವಿಜಿತ್ ಕೆ. ಅವರಿಗೆ ‘ಕಲ್ಕೂರ ಯುವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಚಿತ್ರರಂಗದಲ್ಲಿ ಕನ್ನಡ ಜಾಗೃತಿ ಸಂಚಲನ ಮೂಡಿಸಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಬಾಲನಟರಾದ ರಂಜನ್ ಸಾಜು, ಸಂಪತ್ ಗಣೇಶ್, ಸಪ್ತಾ ಪಾವೂರು, ಪ್ರಕೃತಿ ಡಿ. ಅಮೀನ್ ಅವರಿಗೆ ‘ಕಾರಂತ ಹುಟ್ಟುಹಬ್ಬ ಸಾಧನಾ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ಮನಪಾ ಮೇಯರ್ ಭಾಸ್ಕರ್ ಕೆ., ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಗೂ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು.
ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಿಮರ್ಶಕ ಡಾ.ಪ್ರಭಾಕರ್ ಶಿಶಿಲ, ಮನಪಾದ ಮುಖ್ಯ ಸಚೇತಕ ಶಶಿಧರ್ ಹೆಗಡೆ, ಯೋಗಿಶ್ ಶೆಟ್ಟಿ, ರಾಧಾಕೃಷ್ಣ ಆಚಾರ್ಯ, ಪುರುಷೋತ್ತಮ, ಪ್ರದೀಪ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುರೇಶ್ ಶೆಟ್ಟಿ ಮತ್ತು ತಂಡ ಪ್ರಾರ್ಥಿಸಿತು. ಕಸಾಪ ಜಿಲ್ಲಾ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಸ್ವಾಗತಿಸಿದರು.