ಅ.23: ದಾರುನ್ನೂರು ವಲಯ ಮಹಾಸಭೆ, ಯೂತ್ ಸಮಾವೇಶ
ಮೂಡುಬಿದಿರೆ, ಅ. 10: ಕಾಶಿಪಟ್ಣದ ದಾರುನ್ನೂರು ಎಜುಕೇಶನ್ ಸೆಂಟರ್ ಇದರ ಮೂಡುಬಿದಿರೆ ವಲಯದ ಮಹಾಸಭೆ ಹಾಗೂ 'ದಾರುನ್ನೂರು ಯೂತ್ ಟೀಮ್' ಸಮಾವೇಶವು ಅ. 23ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ದಾರುನ್ನೂರು ಮೂಡುಬಿದಿರೆ ವಲಯ ಸಮಿತಿ ಅಧ್ಯಕ್ಷ ಹಾಜಿ.ಡಿ.ಎ. ಉಸ್ಮಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬುಧವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾಲ್ಕೈದು ವರ್ಷಗಳ ಹಿಂದೆ ಸಮಸ್ತ ಜಮೀಯ್ಯತುಲ್ ಉಲಮಾದ ನೇತಾರರಾದ ಸೈಯದ್ ಹೈದರಾಲಿ ಶಿಹಾಬ್ ತಂಙಳ್ ಅವರಿಂದ ಉದ್ಘಾಟನೆಗೊಂಡ ದಾರುನ್ನೂರು ಎಜುಕೇಶನ್ ಸೆಂಟರ್ನಲ್ಲಿ ಸುಮಾರು 200 ರಷ್ಟು ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿದೆ. ಮಸೀದಿ ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾದ ಕಟ್ಟಡದ ಮತ್ತು ವಸತಿಗಳ ಪ್ರಥಮ ಹಂತವಾಗಿ ಈಗಾಗಲೇ ಸುಮಾರು ಹತ್ತು ಕೋಟಿ ರೂ.ಗಳ ಕಾಮಗಾರಿ ನಡೆದಿದ್ದು, ಸುಮಾರು 200 ರಷ್ಟು ಹೆಣ್ಣುಮಕ್ಕಳ ಶರೀಅತ್ ಕಾಲೇಜು ನಿರ್ಮಾಣದ ಕೆಲಸ ಪ್ರಾರಂಭಗೊಂಡಿದೆ ಎಂದು ಹೇಳಿದರು.
ಅದೇ ದಿನ ಬೆಳಗ್ಗೆ ಎಜುಕೇಶನ್ ಸೆಂಟರ್ನ ಕಚೇರಿಯನ್ನು ಸಿಟಿ ಪಾಯಿಂಟ್ ಕಟ್ಟಡದ ಎರಡನೇ ಮಹಡಿಯಲ್ಲಿ ದ.ಕ. ಖಾಝಿಯವರಾದ ತ್ವಾಖಾ ಅಹಮ್ಮದ್ ಮುಸ್ಲಿಯಾರ್ರವರು ಉದ್ಘಾಟಿಸಲಿದ್ದು, ಬಳಿಕ ಸಮಾಜ ಮಂದಿರದಲ್ಲಿ ನಡೆಯುವ ಸಭೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಅವರು ಎಜುಕೇಶನ್ ಸೆಂಟರ್ನ ಹೊಸ ಓಮ್ನಿ ಕಾರೊಂದನ್ನು ಬಿಡುಗಡೆಗೊಳಿಸಲಿದ್ದಾರೆಂದು ಅವರು ತಿಳಿಸಿದರು.
ಕೇಂದ್ರ ಸಮಿತಿ ದಾರುನ್ನೂರು ಕಾಶಿಪಟ್ಣ ಜನರಲ್ ಮ್ಯಾನೇಜರ್ ಹಾಜಿ ಹೆಚ್.ಎ. ಅಬ್ದುಲ್ ರಹಿಮಾನ್ ಹಾಸ್ಕೋ, ಉಪಾಧ್ಯಕ್ಷ ಜಿ.ಎಮ್.ನಝೀಮುದ್ದೀನ್ ಅಂಗರಕರ್ಯ, ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಮ್.ಜಿ. ಮುಹಮ್ಮದ್ ಹಾಜಿ ತೋಡಾರು, ವರ್ಕಿಂಗ್ ಸೆಕ್ರೆಟರಿ ಯೂಸುಫ್ ಮಿಜಾರು ಹಾಗೂ ಕಾರ್ಯದರ್ಶಿ ಹಾಜಿ ಅಹ್ಮದ್ ಹುಸೈನ್ ಗಂಟಾಲ್ಕಟ್ಟೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.