ಆರು ರಾಜ್ಯದ ಪ್ರತಿನಿಧಿಗಳನ್ನೊಳಗೊಂಡ ‘ಅಖಿಲ ಭಾರತೀಯ ಮೀನುಗಾರರ ಸಂಘ’ ರಚನೆ
ಉಡುಪಿ, ಅ.10: ಮೀನುಗಾರರ ಹಾಗೂ ಮೀನುಗಾರಿಕಾ ಸಮಸ್ಯೆಯನ್ನು ಪರಿಹರಿಸಲು ಪಶ್ಚಿಮ ಕರಾವಳಿಯ ಆರು ರಾಜ್ಯದ ಪ್ರತಿನಿಧಿಗಳನ್ನೊಳಗೊಂಡ ಅಖಿಲ ಭಾರತೀಯ ಮೀನುಗಾರರ ಸಂಘವನ್ನು ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಇತ್ತೀಚೆಗೆ ಗೋವಾದ ಮಡ್ಗಾಂವ್ ನಲ್ಲಿ ಜರಗಿದ ಪಶ್ಚಿಮ ಕರಾವಳಿಯ ಆರು ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ ರಚಿಸಲಾಯಿತು.
ಯಾಂತ್ರಿಕೃತ ಮೀನುಗಾರಿಕೆಗೆ ಉಪಯೋಗಿಸುವ ಡಿಸೇಲ್ ಮೇಲೆ ಕೇಂದ್ರ ಸರಕಾರ ಸಂಪೂರ್ಣ ಕರ ರಹಿತವನ್ನಾಗಿ ಮಾಡಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಬೇಕು. ನಾಡದೋಣಿಯ ಔಟ್ಬೋರ್ಡ್ ಇಂಜಿನ್ಗೆ ಉಪಯೋಗಿ ಸುವ ಸೀಮೆಎಣ್ಣೆಯನ್ನು ರಿಯಾಯಿತಿ ದರದಲ್ಲಿ ನಿರಂತರ ದೊರೆಯುವಂತೆ ಮಾಡಬೇಕು. ಮೀನುಗಾರಿಕೆ ಸಮಸ್ಯೆಗಳ ಪರಿಹಾರಗಳ ಬಗ್ಗೆ ಕೂಡಲೇ ಸ್ಪಂದಿಸಲು ಮೀನುಗಾರಿಕಾ ಸಚಿವರನ್ನು ನೇಮಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರಧಾನ ಮಂತ್ರಿ, ಕೃಷಿ, ರಸ್ತೆ ಮತ್ತು ಹೆದ್ದಾರಿ ಹಾಗೂ ಇಂಧನ ಸಚಿವರಿಗೆ ಆಯಾ ರಾಜ್ಯದ ಸಂಸದರೊಡನೆ ಭೇಟಿ ಮಾಡಿ ವುನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷ ಮನೋಹರ್ ಬೋಳೂರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಾವಳಿಯ ವಿವಿಧ ರಾಜ್ಯಗಳ 128 ಪ್ರತಿನಿಧಿಗಳು ಭಾಗವಹಿಸಿ ದ್ದರು. ಸಭೆಯಲ್ಲಿ ನೂತನ ಸಂಘದ ಅಧ್ಯಕ್ಷರಾಗಿ ಗುಜರಾತ್ನ ವೆಲ್ಜಿಭಾಯ್ ಕೆ.ಮಸನಿ ಅವರನ್ನು ಆಯ್ಕೆ ಮಾಡಲಾಯಿತು. ಎಲ್ಲ ರಾಜ್ಯದಿಂದ ತಲಾ ಒಬ್ಬರು ಉಪಾಧ್ಯಕ್ಷರು, ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಕೋಶಾಧಿಕಾರಿ, ಸಲಹೆಗಾರರನ್ನು ಆರಿಸಲಾಯಿತು.
ಕರ್ನಾಟಕದಿಂದ ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಕೆ.ಸುವರ್ಣ, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಯಶ್ಪಾಲ್ ಸುವರ್ಣ, ಉಪಾಧ್ಯಕ್ಷ ರಾಗಿ ಮನೋಹರ್ ಬೋಳೂರ್, ಸತೀಶ್ ಕುಂದರ್, ಕಾರ್ಯದರ್ಶಿಯಾಗಿ ಕಿಶೋರ್ ಡಿ.ಸುವರ್ಣ, ನಿತಿನ್ ಕುಮಾರ್, ಗಣಪತಿ ಮಾಂಗ್ರೆ, ಸಂಘಟನಾ ಕಾರ್ಯದರ್ಶಿಯಾಗಿ ಕರುಣಾಕರ ಸಾಲ್ಯಾನ್, ಇಬ್ರಾಹಿಂ, ಬಾಬು ಕುಲಾಲ್, ಕೋಶಾಧಿಕಾರಿಯಾಗಿ ಮೋಹನ್ ಬೆಂಗ್ರೆ, ಮುಖ್ಯ ಸಲಹೆಗಾರರಾಗಿ ಮದನ್ ಕುಮಾರ್, ಸುಭಾಶ್ಚಂದ್ರ ಕಾಂಚನ್, ಅನಿಲ್ ಕುಮಾರ್, ಚಂದ್ರಕಾಂತ್ ಕರ್ಕೇರ, ಸದಾನಂದ ಹರಿಕಾಂತ, ಪ್ರಧಾನ ಕೋಶಾಧಿಕಾರಿಯಾಗಿ ಪೋರ್ಟಾಡೊ, ಪ್ರಧಾನ ಸಲಹೆಗಾರರಾಗಿ ಮಹೇಶ್ರಾಜ್ ಮಲ್ಪೆ ಅವರನ್ನು ಆಯ್ಕೆ ಮಾಡಲಾಯಿತು.