ಸಂರಕ್ಷಿತ ಕಾಡುಪ್ರಾಣಿ ಬರ್ಕ ಬೇಟೆ: ಇಬ್ಬರ ಬಂಧನ, ಕಾರು ವಶ
ಹೆಬ್ರಿ, ಅ.10: ಅಳಿವಿನ ಅಂಚಿನಲ್ಲಿರುವ ಕಾಡು ಪ್ರಾಣಿ ಬರ್ಕವನ್ನು ಬೇಟೆ ಯಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಹೆಬ್ರಿ ಮತ್ತು ಕಾರ್ಕಳ ವಲಯ ಅರಣ್ಯಾಧಿಕಾರಿಗಳ ತಂಡ ಬುಧವಾರ ಮುಂಜಾನೆ ಮುದ್ರಾಡಿ ಗ್ರಾಪಂ ವ್ಯಾಪ್ತಿಯ ಕಬ್ಬಿನಾಲೆ ಸಮೀಪದ ಹೊನ್ನಕೊಪ್ಪಲ ಎಂಬಲ್ಲಿ ಬಂಧಿಸಿದೆ.
ಬಂಟ್ವಾಳ ತಾಲೂಕಿನ ಈರ ಗ್ರಾಮದ ಮೊನುದ್ದೀನ್ ಕುಂಜ್ಞ ಹಾಗೂ ವಿಟ್ಲ ಪಡೂರು ಗ್ರಾಮದ ಕುಕ್ಕಿಲ ನಿವಾಸಿ ಶಾಹುಲ್ ಹಮೀದ್ ಬಂಧಿತ ಆರೋಪಿ ಗಳು. ಇವರೊಂದಿಗಿದ್ದ ಬಂಟ್ವಾಳದ ಅಬ್ದುಲ್ ಹಮೀದ್ ಯಾನೆ ಹಮೀದ್ ತಲವಾರ್ ಮತ್ತು ಕಬ್ಬಿನಾಲೆ ಜಡ್ಡು ಮನೆಯ ಸುಧಾಕರ ಮೇರ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ ಬೇಟೆಯಾಡಿದ ಕಾಡುಪ್ರಾಣಿಯನ್ನು ಸಾಗಿಸುತ್ತಿದ್ದ ಮಾರುತಿ 800 ಕಾರು, ಪ್ರಾಣಿ, ಕೋವಿ, ಟಾರ್ಚ್ ಲೈಟ್, ಚೂರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಚರಣೆಯಲ್ಲಿ ಹೆಬ್ರಿ ವಲಯದ ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್, ರಾಘವೇಂದ್ರ ಶೆಟ್ಟಿ, ಅರಣ್ಯ ರಕ್ಷಕರಾದ ದೇವಾನಂದ, ಪ್ರಭಾತ್, ಗಣಪತಿ, ಆನಂದ, ಬಾಬು, ವಾಹನ ಚಾಲಕ ದಿಲೀಪ್ ಪಾಲ್ಗೊಂಡಿದ್ದು, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮತ್ತು ಮೂಡಬಿದಿರೆ ಉಪವಿಭಾಗದ ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ಅಚ್ಚಪ್ಪಮಾರ್ಗದರ್ಶನದಲ್ಲಿ ಹೆಬ್ರಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ ಈ ಬಗ್ಗೆ ನಿಖೆ ನಡೆಸುತ್ತಿದ್ದಾರೆ.