ಅಂಕೋಲಾ: ಲಾರಿ - ಕಾರು ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
ಅಂಕೋಲಾ, ಅ. 10: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ನರು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಅಂಕೋಲಾದ ಮಾದನಗೇರಿ ಬಳಿ ಬುಧವಾರ ನಡೆದಿದೆ.
ಮಹಾರಾಷ್ಟ್ರ ಮೂಲದ ಸುರೇಶ್ ರಾಯ್ಕರ್ (65), ಚಂದ್ರಕಲಾ ರಾಯ್ಕರ್ (60) ಮೃತಪಟ್ಟವರು. ಭಾರತೀ ವೆರ್ಣೇಕರ್ (46) ಅವರ ಕಾಲಿಗೆ ತೀವ್ರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದಿಂದ ಆಗಮಿಸುದ್ದ ಕಾರಿನಲ್ಲಿದ್ದ ಮೂವರು ಕುಮಟಾದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು ಎನ್ನಲಾಗುತ್ತಿದೆ. ಹೆದ್ದಾರಿಯ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಲಾರಿ ಚಾಲಕ ಒಮ್ಮೆಲೆ ಬ್ರೆಕ್ ಹಾಕಿದ್ದು, ಅದೇ ವೇಳೆ ಕಾರಿನ ಚಾಲಕ ಸಹ ಬ್ರೇಕ್ ಹಾಕಿದ. ಹಿಂದಿನಿಂದ ಬರುತಿದ್ದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಎರಗಿದ್ದು, ಇದರಿಂದ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿ, ಮೂವರು ಪ್ರಯಾಣಿಕರು ಕಾರಿನಲ್ಲಿಯೇ ಸಿಲುಕಿಕೊಂಡರು ಎಂದು ತಿಳಿದುಬಂದಿದೆ.
ಬಳಿಕ ಸ್ಥಳೀಯರು ಸೇರಿದಂತೆ ಪೊಲೀಸರು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಹೊರ ತೆಗೆಯಲಾಯಿತು. ಈ ವೇಳೆ ಇಬ್ಬರು ಮೃತಟ್ಟಿದ್ದು, ಗಾಯಗೊಂಡ ಮಹಿಳೆಯನ್ನು ಕುಮಟಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.