ಕಾರ್ಕಳದಲ್ಲಿ ತಂದೆಯ ಕೊಲೆ, ಅಣ್ಣನ ಕೊಲೆಯತ್ನ ಪ್ರಕರಣ: ಅಪರಾಧಿ ಪುತ್ರನಿಗೆ ಜೀವಾವಧಿ ಶಿಕ್ಷೆ
ಮಂಗಳೂರು, ಅ.11: ಆಸ್ತಿಯ ವಿಚಾರದಲ್ಲಿ ತಂದೆಯನ್ನು ಕೊಲೆಗೈದು, ಅಣ್ಣನನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಕಾರ್ಕಳ ಅಜೆಕಾರು ಡಾಲ್ಪಿ ಗೋವಿಯಸ್ (41) ಶಿಕ್ಷೆಗೊಳಗಾದ ಅಪರಾಧಿ. ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ತೀರ್ಪು ಪ್ರಕಟಿಸಿದರು.
ಐಪಿಸಿ ಸೆಕ್ಷನ್ 302 (ಕೊಲೆ) ಕಠಿಣ ಜೀವಾವಧಿ ಶಿಕ್ಷೆ ಜೀವಿತಾವಧಿ ತನಕ. 10 ಸಾವಿರ ರೂ. ದಂಡ. ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆ. ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ. ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆ.
ಐಪಿಸಿ ಸೆಕ್ಷನ್ 201 (ಸಾಕ್ಷ ನಾಶ) 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದರೆ 6 ತಿಂಗಳು ಸಜೆ. ಅಲ್ಲದೆ ಗಾಯಾಳು ಆಗಿದ್ದ ಅಣ್ಣ ಸ್ಟೇನಿ ಗೋವಿಯಸ್ಗೆ ಪರಿಹಾರವಾಗಿ 50 ಸಾವಿರ ರೂ. ಒಂದು ತಿಂಗಳ ಒಳಗೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಆಸ್ತಿ ಹಂಚಿಕೆ ವಿಚಾರದಲ್ಲಿ 2017 ಎ.14ರಂದು ಹೊಸಬೆಟ್ಟು ಕರಿಂಗಾನದಲ್ಲಿರುವ ತಂದೆಯ ಮನೆಗೆ ಅಕ್ರಮ ಪ್ರವೇಶ ಮಾಡಿ ತಂದೆ ಪೌಲ್ ಗೋವಿಯಸ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಅಣ್ಣ ಸ್ಟೇನಿ ಗೋವಿಯಸ್ಗೆ ತಲವಾರ್ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ.
ಮೂಡುಬಿದಿರೆಯ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಪರಾಧಿಯ ತಂದೆ ಪೌಲ್ ಗೊವಿಯಸ್ ಮತ್ತು ತಾಯಿ ಲಿಲ್ಲಿ ಪೌಲ್ ಗೊವಿಯಸ್ ಅವರ ಜೀವಿತ ಕಾಲದಲ್ಲಿ ಮೂಡುಬಿದಿರೆ ಠಾಣೆಗೆ ನೀಡಿದ ದೂರುಗಳ ಬಗ್ಗೆ ಕೂಡ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ದಾಖಲೆ ಸಮೇತ ಸಾಕ್ಷ ನುಡಿದಿದ್ದಾರೆ.
ಈ ಪ್ರಕರಣದಲ್ಲಿ ತನಿಖೆಯ ವೇಳೆ ಪೊಲೀಸರು ಅಪರಾಧಿಯ ಹೇಳಿಕೆಯಂತೆ ಡಿವಿಆರ್ ವಶಪಡಿಸಿಕೊಂಡಿದ್ದು, ಡಿವಿಆರ್ ದೃಶ್ಯಾವಳಿಯನ್ನು ಪೆನ್ಡ್ರೈವ್ನಲ್ಲಿ ಸಂಗ್ರಹಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ದೃಶ್ಯಾವಳಿಗಳನ್ನು ವೀಕ್ಷಿಸಲಾಗಿತ್ತು. ಸರಕಾರದ ಪರವಾಗಿ 36 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.