ಎಂ.ಪಿ.ಇಸ್ಮಾಯೀಲ್ ಜೋಕಟ್ಟೆ
ಮಂಗಳೂರು, ನ.8: ಬಡವರ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಜೋಕಟ್ಟೆ ನಿವಾಸಿ ಎಂ.ಪಿ.ಇಸ್ಮಾಯೀಲ್(68) ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಸಮಾಜ ಸೇವಕ, ಬಡ ವಿದ್ಯಾರ್ಥಿಗಳನ್ನು ಹೆಚ್ಚು ಅಂಕ ಗಳಿಸಲು ಪ್ರೋತ್ಸಾಹಿಸಿ ವೈದ್ಯಕೀಯ, ತಾಂತ್ರಿಕ ಶಿಕ್ಷಣವನ್ನು ನೀಡುವಲ್ಲಿ ಸದಾ ಶ್ರಮಿಸುತ್ತಿದ್ದ ಇಸ್ಮಾಯೀಲ್ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಜೋಕಟ್ಟೆ ಅಂಜುಮನ್ ವಿದ್ಯಾಸಂಸ್ಥೆಗಳ ಸಲಹೆಗಾರರಾಗಿ, ಬೆಂಗಳೂರಿನ ಹಿಮಾಲಯ ಮೆಡಿಕಲ್ ಡ್ರಗ್ಸ್ನ ಉನ್ನತ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದ ಅವರು ಕೊಡುಗೈ ದಾನಿಯಾಗಿದ್ದರು.
ಮೃತರು ಪತ್ನಿ, ಕೆನಡಾದಲ್ಲಿ ನೆಲೆಸಿರುವ ಖ್ಯಾತ ವೈದ್ಯ ಪುತ್ರ ಶಾಮಿಲ್, ದುಬೈನಲ್ಲಿ ವಾಸಿಸುತ್ತಿರುವ ಪುತ್ರಿ ವೈದ್ಯೆ ಸಬ್ರಿನಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಂತಾಪ: ಎಂ.ಪಿ.ಇಸ್ಮಾಯೀಲ್ ಅವರ ನಿಧನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಂತಾಪ ಸೂಚಿಸಿದ್ದಾರೆ.