ಕೇರಳ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಆರೋಪಿ ಬಿಷಪ್ ವಿರುದ್ಧ ಪ್ರತಿಭಟಿಸಿದ ಪಾದ್ರಿಗೆ ಚರ್ಚ್ ಎಚ್ಚರಿಕೆ
ತಿರುವನಂತಪರಂ, ನ.22: ಜಲಂಧರ್ ಬಿಷಪ್ ಫ್ರಾಂಕೊ ಮುಲಕ್ಕಲ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದ ಕ್ರೈಸ್ತ ಸನ್ಯಾಸಿನಿಯನ್ನು ಬೆಂಬಲಿಸಿ ನವೆಂಬರ್ 14ರಂದು ಪ್ರತಿಭಟನೆ ಆಯೋಜಿಸಿದ್ದ ಪಾದ್ರಿ(ಕ್ರೈಸ್ತ ಧರ್ಮಗುರು) ಆಗಸ್ಟಿನ್ ವೆಟ್ಟೋಲ್ಗೆ ಕೇರಳದ ಸಿರೊ ಮಲಬಾರ್ ಚರ್ಚ್ ಎಚ್ಚರಿಕೆ ನೀಡಿದೆ.
ತಿರುವನಂತಪುರಂನ ರಾಜ್ಯ ಸಚಿವಾಲಯದ ಎದುರು ನವೆಂಬರ್ 14ರಂದು ‘ಸೇವ್ ಅವರ್ ಸಿಸ್ಟರ್ಸ್’ ಎಂಬ ಹೆಸರಿನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಫಾದರ್ ಆಗಸ್ಟಿನ್ ವೆಟ್ಟೋಲ್ ಸಂಯೋಜಿಸಿದ್ದರು. ಆರೋಪಿ ಬಿಷಪ್ಗೆ ಮಂಜೂರಾಗಿದ್ದ ಜಾಮೀನನ್ನು ರದ್ದುಗೊಳಿಸಬೇಕು ಹಾಗೂ ಬಿಷಪ್ ವಿರುದ್ಧದ ಪ್ರಕರಣದಲ್ಲಿ ಸಾಕ್ಷಿದಾರನಾಗಿದ್ದ ಫಾದರ್ ಕುರಿಯಕೋಸ್ ಕಟ್ಟುತ್ತರ ಸಾವಿನ ಪ್ರಕರಣದ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆದಿತ್ತು.
“ನವೆಂಬರ್ 14ರಂದು ನಡೆದ ಪ್ರತಿಭಟನೆಯನ್ನು ನೀವು ಸಂಯೋಜಿಸಿದ್ದೀರಿ ಎಂಬ ಮಾಹಿತಿ ದೊರೆತಿದೆ. ಪಾದ್ರಿಯೊಬ್ಬರು ಈ ರೀತಿ ಮಾಡಿದರೆ ಅದರಿಂದ ಸಾರ್ವಜನಿಕರಲ್ಲಿ ಚರ್ಚ್ನ ಬಗ್ಗೆ ಇರುವ ವಿಶ್ವಾಸಾರ್ಹತೆಗೆ ಮತ್ತು ಭಕ್ತರ ಭಾವನೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ಇನ್ನು ಮುಂದೆ ಈ ರೀತಿಯ ಕೃತ್ಯಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ. ಇದನ್ನು ಪಾಲಿಸದವರ ವಿರುದ್ಧ ಚರ್ಚ್ನ ನಿಯಮದಂತೆ ಕಠಿಣ ಕ್ರಮ ಜರಗಿಸಲಾಗುತ್ತದೆ” ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.