ಹೊಸ ಗ್ರಾಮೀಣ ಆರ್ಥಿಕ ನೀತಿ ರಚನೆಯಾಗಲಿ: ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು, ನ.24: ದೇಶದಲ್ಲಿಂದು ಆರ್ಥಿಕ ಮೂಲಭೂತವಾದ ಹಾಗೂ ಏಕಮುಖಿ ಆರ್ಥಿಕ ನೀತಿಗಳು ಮಿತಿ ಮೀರಿದೆ. ಇದಕ್ಕೆ ಪರ್ಯಾಯವಾಗಿ ಹೊಸ ಗ್ರಾಮೀಣ ಆರ್ಥಿಕ ನೀತಿ ರೂಪಗೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.
ಶನಿವಾರ ನಗರದ ಕಸಾಪದಲ್ಲಿ ಆಯೋಜಿಸಿದ್ದ ‘ರೈತರಿಗಾಗಿ ದೇಶ’ ದಿಲ್ಲಿ ಚಲೊ ಬೆಂಬಲಿಸಿ ಸಾಂಸ್ಕೃತಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿಂದು ನಾವು ಏಕಮುಖ ಆರ್ಥಿಕ ನೀತಿಗಳನ್ನು ಅನುಕರಣೆ ಮಾಡುತ್ತಿದ್ದೇವೆ. ಇದರಿಂದಾಗಿಯೇ ಆರ್ಥಿಕ ಮೂಲಭೂತವಾದ ನಮ್ಮನ್ನು ಕಾಡುತ್ತಿದೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ಹೀಗಾಗಿ, ದೇಶದಲ್ಲಿ ಆರ್ಥಿಕ ನೀತಿಗಳು ಪಲ್ಲಟಗೊಳ್ಳಬೇಕು ಎಂದರು.
ಗ್ರಾಮೀಣ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಉದ್ಯೋಗ ಸೃಷ್ಟಿ, ಕೃಷಿ ಅಭಿವೃದ್ಧಿ, ಮಹಿಳೆಯರು, ಕೂಲಿ ಕಾರ್ಮಿಕರನ್ನು ಹೇಗೆ ಉಳಿಸಬೇಕು ಎಂಬುದನ್ನು ಯೋಚಿಸಬೇಕು. ಈಗ ಇರುವ ಕಾರ್ಪೋರೇಟ್ ಆರ್ಥಿಕ ನೀತಿಯಿಂದ ಬಹುಭಾಷೆ, ಸಂಸ್ಕೃತಿ ಹೊಂದಿರುವ ನಮ್ಮ ದೇಶದಲ್ಲಿ ಗ್ರಾಮೀಣ ಕೇಂದ್ರಿತ ಹೊಸ ಆರ್ಥಿಕ ನೀತಿ ರೂಪಗೊಳ್ಳಬೇಕು ಎಂದು ಅವರು ನುಡಿದರು.
ರೈತರ ಸಮಸ್ಯೆ ಎಂಬುದು ಒಂದು ರಾಜ್ಯಕ್ಕೆ ಸಂಬಂಧಿಸಿದಲ್ಲ. ಅದು ಎಲ್ಲ ರಾಜಕೀಯ ಪಕ್ಷಗಳಿಗೂ ಎಲ್ಲ ರಾಜ್ಯಗಳಿಗೂ ಸಂಬಂಧಿಸಿದ ಸಮಸ್ಯೆಯಾಗಿದೆ. ದೇಶದಲ್ಲಿ ಕೃಷಿಕರನ್ನು ಉಳಿಸುವ ಸಲುವಾಗಿ ಸಾಲ ಮನ್ನಾ ಎಂಬುದು ತಾತ್ಕಾಲಿಕ ಪರಿಹಾರ. ರೈತರು ಬೆಳೆಯುವ ಬೆಳೆಗಳಿಗೆ, ಕೃಷಿ ಉತ್ಪನ್ನಗಳಿಗೆ ನ್ಯಾಯಯುತವಾದ, ಶಾಶ್ವತ ಪರಿಹಾರ ಕಲ್ಪಿಸಲು ನಿಜವಾದ ಆರ್ಥಿಕ ಭದ್ರತೆ ಬೇಕು. ಅದನ್ನು ನೀಡಬೇಕು ಎಂದು ರೈತರು ಸಾವಿರಾರು ಸಂಖ್ಯೆಯಲ್ಲಿ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ 10 ವರ್ಷಗಳಲ್ಲಿ 13 ಲಕ್ಷ ಸಾವಿರ ಕೋಟಿ ಕಾರ್ಪೋರೇಟ್ಗಳ ಸಾಲ ಮನ್ನಾ ಮಾಡಲಾಗಿದೆ. ಇಂದಿನ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ನಾಲ್ಕೂವರೆ ವರ್ಷದಲ್ಲಿ 5.72 ಲಕ್ಷ ಸಾವಿರ ಕೋಟಿ ರೂ.ಗಳಷ್ಟು ಕಾರ್ಪೋರೇಟ್ಗಳ ಸಾಲ ಮನ್ನಾ ಮಾಡಲಾಗಿದೆ. ಅಲ್ಲದೆ, 35 ಸಾವಿರ ಕೋಟಿ ರೂ.ಗಳಷ್ಟು ರಿಯಾಯಿತಿಯನ್ನೂ ನೀಡಲಾಗಿದೆ. ಆದರೆ, ರೈತರ ಸಾಲ ಕೇವಲ 1.15 ಲಕ್ಷ ಕೋಟಿ. ಅದನ್ನು ಮನ್ನಾ ಮಾಡಲು ಸರಕಾರಗಳು ಮುಂದಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಇಂದು ಆಡಳಿತ ನಡೆಸುತ್ತಿರುವ ಸರಕಾರಗಳು ಕಾರ್ಪೋರೇಟ್ ವ್ಯವಸ್ಥೆಗೆ ನೀಡುತ್ತಿರುವಷ್ಟು ಆದ್ಯತೆ ರೈತರ ಪರವಾಗಿ ನೀಡುತ್ತಿಲ್ಲ. ಕೋಟ್ಯಂತರ ರಿಯಾಯಿತಿಗಳನ್ನು ನೀಡುತ್ತಿದ್ದರೂ, ರೈತರ ಬಗ್ಗೆ ಕನಿಷ್ಠ ಕಾಳಜಿಯನ್ನು ತೋರಿಸುತ್ತಿಲ್ಲ. ಶೇ.69 ರಷ್ಟು ರೈತರು ಹಾಗೂ ಶೇ.82 ರಷ್ಟು ಅತಿಸಣ್ಣ ರೈತರು ಸಾಂಸ್ಥಿಕ ಸಾಲದಿಂದ ವಂಚಿತರಾಗುತ್ತಿದ್ದಾರೆ. ಎಲ್ಲವನ್ನೂ ಕಾರ್ಪೋರೇಟ್ ಕಂಪೆನಿಗಳಿಗೆ ನೀಡಲಾಗುತ್ತಿದೆ. ಸರಕಾರಗಳ ಬಜೆಟ್ನಲ್ಲಿಯೂ ಕೃಷಿಗೆ ಪೂರಕವಾದ ರೀತಿಯಲ್ಲಿ ಹಣ ಹಂಚಿಕೆಯೂ ಆಗುತ್ತಿಲ್ಲ ಎಂದರು.
ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ದೇಶದಲ್ಲಿ ಲಕ್ಷಾಂತರ ರೈತರ ಆತ್ಮಹತ್ಯೆಗಳು ನಡೆಯುತ್ತಿದ್ದರೂ, ಆಳುವ ಸರಕಾರಗಳು ರೈತರ ಪರವಾದ ನಿಲುವುಗಳನ್ನು ಕೈಗೊಳ್ಳುತ್ತಿಲ್ಲ. ಸಮಸ್ಯೆಗಳನ್ನು ಆಧರಿಸಿ ಕ್ರಮ ಕೈಗೊಂಡರೆ ಎಲ್ಲ ಸಮಸ್ಯೆಗಳು ಸರಿಯಾಗುತ್ತವೆ. ಆದರೆ, ಇಂದಿನ ಸರಕಾರಕ್ಕೆ ರೈತ, ದಲಿತ, ಅಲ್ಪಸಂಖ್ಯಾತ, ಮಹಿಳೆಯರ ಸಮಸ್ಯೆಗಳು ಬೇಕಾಗಿಲ್ಲ ಎಂದು ದೂರಿದರು.
ಸಾಮಾಜಿಕ ಜಾಲತಾಣದಲ್ಲಿ ಸಂಘಪರಿವಾದ ಕಾರ್ಯಕರ್ತರು ಯುವಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗಾಗಿ, ದೇಶದಲ್ಲಿ ರೈತರ, ಯುವಜನರ ಸಮಸ್ಯೆಗಳು, ಬಡತನ, ನಿರುದ್ಯೋಗ, ಆತ್ಮಹತ್ಯೆಗಳು ಯಾವುದೂ ಮುಖ್ಯವಾಹಿನಿಯಲ್ಲಿ ಚರ್ಚೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್, ರಂಗಕರ್ಮಿ ಸಿ.ಬಸವಲಿಂಗಯ್ಯ, ಸಂಗೀತ ನಿರ್ದೇಶಕ ವಿ.ಮನೋಹರ್, ಕಲಾವಿದ ಪ.ಸ.ಕುಮಾರ್ ಹಾಗೂ ಗಾಯಕಿ ಅರ್ಚನಾ ಉಡುಪ ಉಪಸ್ಥಿತರಿದ್ದರು.