ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಕೈಯಿಂದ ಜಾರಿದ ಕಿಂಗ್ಪಿನ್?
ಬೆಂಗಳೂರು, ನ.28: ನಾಗರಿಕ ಪೊಲೀಸ್ ಪೇದೆ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮತ್ತೊರ್ವ ಕಿಂಗ್ಪಿನ್ ಸಿಸಿಬಿಯಿಂದ ಕೂದಲೆಳೆಯ ಅಂತರದಲ್ಲಿ ಜಾರಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸೋರಿಕೆ ಪ್ರಕರಣದ ಪೈಕಿ ಪ್ರಮುಖ ರೂವಾರಿ ಶಿವಕುಮಾರ್ ಸಿಸಿಬಿ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾನೆ. ಮತ್ತೋರ್ವ ಪ್ರಮುಖ ಆರೋಪಿ ಬಸವರಾಜ್ ತಲೆಮರೆಸಿಕೊಂಡಿದ್ದಾನೆ. ಆದರೆ, ಬುಧವಾರ ಬಸವರಾಜ್ ತನಿಖಾಧಿಕಾರಿಗಳ ಬಲೆಗೆ ಸಿಲುಕದೆ, ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಜಾರಿದ್ದು ಹೇಗೆ?: ಪ್ರಮುಖ ರೂವಾರಿ ಬಸವರಾಜು, ತುಮಕೂರು ರಸ್ತೆಯ ಟೋಲ್ ಗೇಟ್ ಬಳಿ 50 ಲಕ್ಷ ಹಣ ಇಟ್ಟುಕೊಂಡು ಸಹಚರನಿಗಾಗಿ ಕಾಯುತ್ತಿದ್ದ ಎನ್ನಲಾಗಿದೆ. ಈ ಮಾಹಿತಿ ಪಡೆದ ಪೊಲೀಸರು ಎರಡು ತಂಡ ರಚಿಸಿಕೊಂಡು ಬಸವರಾಜ್ ಬೆನ್ನು ಬಿದ್ದಿದರು. ಪೊಲೀಸರು ಬೆನ್ನು ಬಿದ್ದಿರುವ ಮಾಹಿತಿ ಪಡೆದ ಬಸವರಾಜ್ ಅಲ್ಲಿಂದ ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾನೆ. ನಂತರವೂ ಬಿಡದ ಪೊಲೀಸರು ಆತನನ್ನು ಹಿಂಬಲಿಸಿದ್ದಾರೆ. ಆದರೆ ಕೊನೆ ಘಳಿಗೆಯಲ್ಲಿ ಆತ ಪರಾರಿಯಾಗಿದ್ದಾನೆ ತಿಳಿದು ಬಂದಿದೆ.