ಸಿಬಿಐ ನಿರ್ದೇಶಕರ ವಜಾ ನಿರ್ಧಾರ ಪರಾಮರ್ಶೆ ಮೊದಲು: ಸುಪ್ರೀಂಕೋರ್ಟ್
ಹೊಸದಿಲ್ಲಿ, ನ. 30: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಅಧಿಕಾರ ಕಿತ್ತುಕೊಂಡ ಕೇಂದ್ರ ಸರ್ಕಾರದ ಕ್ರಮ ಕಾನೂನುಬದ್ಧವೇ ಎಂದು ಮೊದಲು ಪರಾಮರ್ಶಿಸಿದ ಬಳಿಕ ಅವರ ವಿರುದ್ಧ ಕೇಂದ್ರೀಯ ವಿಚಕ್ಷಣಾ ಆಯೋಗ ನೀಡಿದ ವರದಿಯನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.
ಅಲೋಕ್ ವರ್ಮಾ ಅವರ ಅಧಿಕಾರ ಕಿತ್ತುಕೊಂಡ ಕ್ರಮಕ್ಕೆ ಉನ್ನತ ಮಟ್ಟದ ಆಯ್ಕೆ ಸಮಿತಿ ಒಪ್ಪಿಗೆ ನೀಡಬೇಕಿತ್ತು ಎಂಬ ವಾದದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ವರ್ಮಾ ವಿರುದ್ಧದ ಪ್ರಾಥಮಿಕ ತನಿಖಾ ವರದಿಯನ್ನು ಅಧ್ಯಯನ ಮಾಡಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಅವಕಾಶ ನೀಡಿದ ಸುಪ್ರೀಂಕೋರ್ಟ್, ಸಿವಿಸಿ ತನ್ನ ತನಿಖೆ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದಾಗ ಮೇಲಿನ ಸ್ಪಷ್ಟನೆ ನೀಡಿತು.
ವರ್ಮಾ ವಿರುದ್ಧದ ನಾಲ್ಕು ಆರೋಪಗಳ ಪೈಕಿ ಮೂರನ್ನು ಸಿವಿಸಿ ಪಟ್ಟಿಮಾಡಿದೆ. ನಾಲ್ಕನೇ ಆರೋಪದ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ವೇಣುಗೋಪಾಲ್ ಅವರು, ಮುಖ್ಯನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಸಂಜಯ್ ಕಿಶನ್ ಹಾಗೂ ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಮನವಿ ಮಾಡಿದರು.
ಇದಕ್ಕೂ ಮುನ್ನ ವರ್ಮಾ ಪರ ವಕೀಲ ಫಾಲಿ ಎಸ್.ನಾರಿಮನ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ವಕೀಲ ಕಪಿಲ್ ಸಿಬಾಲ್, ಕಾಮನ್ ಕಾಸ್ ಸ್ವಯಂಸೇವಾ ಸಂಸ್ಥೆಯ ವಕೀಲ ದುಶ್ಯಂತ್ ದವೇ ಮತ್ತು ರಾಜೀವ್ ಧವನ್ ಅವರ ವಾದವನ್ನು ಪೀಠ ಆಲಿಸಿತು. ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವ ಉನ್ನತ ಮಟ್ಟದ ಸಮಿತಿಯ ಅನುಮತಿ ಪಡೆಯದೇ ಕೇಂದ್ರ ಸರ್ಕಾರ, ಅವರ ಅಧಿಕಾರವನ್ನು ಮೊಟಕು ಗೊಳಿಸಬಹುದೇ ಎಂಬ ವಿಚಾರದಲ್ಲಿ ಇವರು ವಾದ ಮಂಡಿಸಿದರು.
ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ಮುಖಂಡ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಸಿಬಿಐ ನಿರ್ದೇಶಕರನ್ನು ನೇಮಕ ಮಾಡುತ್ತದೆ.