ಭಾರತವನ್ನು ಪ್ರೀತಿಸಿ, ಅದರ ಶ್ರೇಯೋಭಿವೃದ್ಧಿಗೆ ಶ್ರಮಿಸಿ: ಮಕ್ಕಾದ ಮುಫ್ತಿ ವಸೀಯುಲ್ಲಾಹ್ ಅಬ್ಬಾಸ್ ಕರೆ
ವಾರಣಾಸಿ, ಡಿ.1: ಭಾರತವನ್ನು ಪ್ರೀತಿಸಿ ಹಾಗೂ ಇಸ್ಲಾಂ ಧರ್ಮದ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಭಾರತದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಎಂದು ಮಕ್ಕಾದ ಮಸೀದಿಯ ಮುಫ್ತಿ ಮೌಲಾನ ವಸೀಯುಲ್ಲಾಹ್ ಅಬ್ಬಾಸ್ ಕರೆ ನೀಡಿದ್ದಾರೆ.
ಇಲ್ಲಿನ ಇಸ್ಲಾಮಿಕ್ ಸೆಮಿನರಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಗುರುವಾರ ಹಾಗೂ ಶುಕ್ರವಾರ ನಡೆದ ಇಸ್ಲಾಮಿಕ್ ಸೆಮಿನರಿಯ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
“ಇಸ್ಲಾಂ ಪ್ರೀತಿ ಮತ್ತು ಸಾಮರಸ್ಯದ ಪಾಠಗಳನ್ನು ಕಲಿಸುತ್ತದೆ. ನಾವು ಸೋದರರು ಹಾಗೂ ನಾವು ಪರಸ್ಪರರನ್ನು ಗೌರವಿಸಬೇಕು'' ಎಂದು ಭಾರತೀಯ ಮೂಲದ ಸೌದಿ ನಾಗರಿಕರಾಗಿರುವ ಮೌಲಾನ ಅಬ್ಬಾಸ್ ಹೇಳಿದರು.
ಶಾರ್ಜಾ ಮೂಲದ ವಿದ್ವಾಂಸ ಮೌಲಾನ ಝಫರುಲ್ ಹಸನ್ ಮದನಿ ಮಾತನಾಡುತ್ತಾ ``ಈ ಸೆಮಿನರಿಯ ಪದವೀಧರರು ಜಗತ್ತಿನ ವಿವಿಧ ಭಾಗಗಳಲ್ಲಿ ಭಾರತದ ಹಿರಿಮೆಯನ್ನು ಬೆಳಗಿಸುತ್ತಿದ್ದಾರೆ'' ಎಂದು ಹೇಳಿದರು.
ಸೆಮಿನರಿಯ ಉಪಕುಲಪತಿಗಳಾದ ಮೌಲಾನ ಯೂನುಸ್ ಮದನಿ ಭಾಷಣದಲ್ಲಿ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಭಾರತೀಯ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. “ಕೇವಲ ಇಸ್ಲಾಮಿಕ್ ವಿದ್ವಾಂಸರನ್ನು ತಯಾರಿಸುವುದಷ್ಟೇ ನಮ್ಮ ಸೆಮಿನರಿಯ ಕೆಲಸವಲ್ಲ, ಬದಲಾಗಿ ಸಮಾಜದ ಉನ್ನತಿಗಾಗಿ ಶ್ರಮಿಸುವ ಮಹಾನ್ ವ್ಯಕ್ತಿಗಳನ್ನೂ ಅದು ಕೊಡುಗೆಯಾಗಿ ನೀಡಿದೆ''ಎಂದು ಅವರು ಹೇಳಿದರು.
ಮೌಲಾನ ಅಬ್ಬಾಸ್ ಅವರ ಜತೆಗೆ ಈ ಸಮಾರಂಭದಲ್ಲಿ ಸಂಯುಕ್ತ ಅರಬ್ ಸಂಸ್ಥಾನದಿಂದ ಮೌಲಾನ ಅಬ್ದುರ್ರಝಾಕ್ ಸಲಫಿ, ಕುವೈತ್ ನಿಂದ ಮೌಲಾನ ಅನ್ವರ್ ಖಾಸ್ಮಿ ಸಲಫಿ ಹಾಗೂ ನೇಪಾಳದಿಂದ ಮೌಲಾನ ಅಬ್ದುಲ್ ಮನ್ನಾನ್ ಭಾಗವಹಿಸಿದ್ದಾರೆ.
1963ರಲ್ಲಿ ಆಗಿನ ಸೌದಿ ಅರೇಬಿಯಾದ ರಾಯಭಾರಿ ಯೂಸುಫ್ ಅಲ್ ಫೌಝಾನ್ ಅವರು ಈ ಸೆಮಿನರಿಯನ್ನು ಸ್ಥಾಪಿಸಿದ್ದರು. ಸೌದಿ ಅರೇಬಿಯಾದ ಜಾಮಿಯಾ ಇಸ್ಲಾಮಿಯಾ ಮದೀನಾದ ಉಪಕುಲಪತಿಗಳಾದ ಶೇಖ್ ಇಬ್ನ್ ಬಝ್ ಅವರ ಪ್ರತಿನಿಧಿ ಅಲ್ಲಾಮ ಅಬ್ದುಲ್ ಖಾದಿರ್ ಶೈಬತುಲ್ ಹಮೀದ್ ಈ ಸೆಮಿನರಿಯನ್ನು 1966ರಲ್ಲಿ ಉದ್ಘಾಟಿಸಿದ್ದರು.