ಮಸೀದಿಯಲ್ಲಿರುವ ಸಮಾನತೆಯ ವಾತಾವರಣ ದೇವಸ್ಥಾನಗಳಲ್ಲೂ ಬರಲಿ: ಮೂಡ್ನಾಕೂಡು ಚಿನ್ನಸ್ವಾಮಿ
ಬೆಂಗಳೂರು, ಡಿ.2: ಮುಸ್ಲಿಮರು ನಮಾಝ್ ಮಾಡುವಾಗ ಗಣ್ಯ ವ್ಯಕ್ತಿಗಳು ಆಗಮಿಸಿದರೆ ಬೇಧ-ಭಾವವಿಲ್ಲದೆ ಸಮಾನವಾಗಿ ನಮಾಝ್ ಮಾಡುತ್ತಾರೆ. ಇದೇ ವಾತಾವರಣ ದೇವಸ್ಥಾನಗಳಲ್ಲೂ ಬರಬೇಕು ಎಂದು ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ರವಿವಾರ ನಗರದ ಪುರಭವನ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಆಯೋಜಿಸಿದ್ದ, ಪ್ರವಾದಿ ಮುಹಮ್ಮದ್(ಸ)ರ ಮಾನವೀಯ ಶಿಕ್ಷಣಗಳು-ಪ್ರಸ್ತುತತೆ ಕುರಿತ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಗತ್ತಿನಲ್ಲಿಯೇ ಭ್ರಾತೃತ್ವವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವುದು ಇಸ್ಲಾಮ್ ಧರ್ಮ ಮಾತ್ರ. ನಮಾಝ್ ಮಾಡುವಾಗ ಗಣ್ಯ ವ್ಯಕ್ತಿಗಳು ಬಂದರೂ ಬೇಧ ಭಾವವಿಲ್ಲದೆ ಸಮಾನವಾಗಿ ನಮಾಝ್ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಗಣ್ಯ ವ್ಯಕ್ತಿಗಳಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ ಎಂದು ಹೇಳಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹನುಮಂತನನ್ನು ದಲಿತ ಎಂದಿದ್ದರು. ಅವರು ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಇಲ್ಲಿ ದೇವರನ್ನು ದಲಿತ ಎಂಬುದಾಗಿ ಕರೆದು ಅಪಮಾನ ಮಾಡಿದ್ದಾರೆಂದು ಬ್ರಾಹ್ಮಣ ಸಮುದಾಯ ಈ ಆರೋಪ ಖಂಡಿಸಿ, ನ್ಯಾಯಾಲಯದ ಮೆಟ್ಟಿಲೇರಿದೆ. ದಲಿತ ಎಂಬುದಕ್ಕಾಗಿ ಆಂದೋಲನ ನಡೆಸಿದರೆ, ಆ ಸ್ಥಿತಿಯಲ್ಲೇ ಬದುಕುತ್ತಿರುವ ಅವರ ಪಾಡು ಹೇಗಿರಬೇಡ. ಇದು ಮೇಲುಕೀಳು, ಮಡಿಮೈಲಿಗೆಯ ಪ್ರಶ್ನೆಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯಸಭಾ ಸದಸ್ಯ ಪ್ರೊ.ಎಂ.ವಿ.ರಾಜೀವಗೌಡ ಮಾತನಾಡಿ, ಇಂದು ಧರ್ಮ ಧರ್ಮಗಳ ನಡುವೆ ಸಂಘರ್ಷದ ವಾತಾವರಣ ಸೃಷ್ಟಿ ಆಗುತ್ತಿದೆ. ಸಾಮರಸ್ಯ, ಸೌಹಾರ್ದ ಕ್ಷೀಣಿಸಿದೆ. ಇಂತಹ ಕಾಲಘಟ್ಟದಲ್ಲಿ ಸೌಹಾರ್ದತೆಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವಂತೆ ಆಗಬೇಕು ಎಂದು ಹೇಳಿದರು.
ಕರ್ನಾಟಕ ಸದ್ಭಾವನಾ ವೇದಿಕೆಯ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ ಉಡುಪಿ ಮಾತನಾಡಿ, ದಲಿತರು, ಗುಲಾಮರನ್ನು, ಮಹಿಳೆಯರನ್ನು ಮೇಲೆತ್ತುವ ಕಾರ್ಯ ದೇಶದಲ್ಲಿ ನಡೆಯುತ್ತಿಲ್ಲ. ಮುಹಮ್ಮದ್ ಪೈಗಂಬರ್ ಅವರ ಆದರ್ಶ, ಮಾರ್ಗದರ್ಶನದಲ್ಲಿ ನಡೆದರೆ ಬದಲಾವಣೆ ಸಾಧ್ಯ ಎಂದು ಹೇಳಿದರು.
ಪೈಗಂಬರ್ ಎಲ್ಲ ಕಾಲಕ್ಕೂ ಅನ್ವಯಿಸುವ ಮೌಲ್ಯಗಳನ್ನು ನೀಡಿದ್ದಾರೆ. ಆದರೆ, ಇಂದು ಅನ್ಯಾಯ, ದೌರ್ಜನ್ಯ, ಕೋಮುವಾದಿ, ಅತ್ಯಾಚಾರ, ಭ್ರಷ್ಟಾಚಾರ ಸೇರಿದಂತೆ ಬಡವರ ಹಾಗೂ ದುರ್ಬಲರ ಶೋಷಣೆ ಹೆಚ್ಚಾಗಿದೆ. ಇದರಿಂದ ಮಾನವೀಯತೆ ವಿನಾಶದ ಅಂಚಿನಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತ ಪುಸ್ತಕ ಮೇಳ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿ ಡಾ.ಬೆಳಗಾಮಿ ಮುಹಮ್ಮದ್ ಸಾದ್, ಚಿಂತಕ ಖಲೀಲುರ್ರಹ್ಮಾನ್ ಸಜ್ಜಾದ್ ನೂಮಾನಿ ಸಾಹೇಬ್ ಸೇರಿದಂತೆ ಪ್ರಮುಖರಿದ್ದರು.