ಗುಜರಾತ್ ಕಾನ್ಸ್ಟೇಬಲ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಬಿಜೆಪಿಯ ಇಬ್ಬರು ನಾಯಕರ ಬಂಧನ
ಹೊಸದಿಲ್ಲಿ, ಡಿ.3: ಪ್ರಶ್ನೆ ಪತ್ರಿಕೆ ಸೋರಿಕೆಯ ವರದಿ ಬಳಿಕ ಗುಜರಾತ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ರದ್ದುಗೊಂಡ ಮರುದಿನವೇ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಇಬ್ಬರು ಮುಖಂಡರು ಸಹಿತ ನಾಲ್ವರನ್ನು ಬಂಧಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ನಾಯಕರಾದ ಮುಕೇಶ್ ಚೌಧರಿ ಹಾಗೂ ಮನೋಹರ್ ಪಾಟೆ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ.
ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದಿತ್ತು. ತಕ್ಷಣವೇ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ. ತಕ್ಷಣವೇ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜ್ಯ ಗೃಹ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಈ ಘಟನೆಯ ಹಿಂದೆ ಆಡಳಿತರೂಢ ಬಿಜೆಪಿ ನಾಯಕರ ಕೈವಾಡವಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಹಾಲಿ ಹೈಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಸಿಟ್ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಸುಮಾರು 8.75 ಲಕ್ಷ ಅಭ್ಯರ್ಥಿಗಳು ಲೋಕ ರಕ್ಷಕ್ ದಳ ಪರೀಕ್ಷೆಗೆ ಹಾಜರಾಗಬೇಕಾಗಿತ್ತು. 9,713 ರಷ್ಟು ಶಸ್ತ್ರಾಸ್ತ್ರರಹಿತ ಲೋಕ ರಕ್ಷಕ್, ಶಸ್ತ್ರಸಜ್ಜಿತ ಲೋಕ ರಕ್ಷಕ್ ಹಾಗೂ ಜೈಲು ಸಿಪಾಯಿ ಹುದ್ದೆಗಳಿಗೆ ಪರೀಕ್ಷೆ ನಿಗದಿಯಾಗಿತ್ತು