ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅತಿಯಾದ ಪ್ರಚಾರ: ಮಾಜಿ ಸೇನಾಧಿಕಾರಿ ಹೂಡ ಅಸಮಾಧಾನ
ಹೊಸದಿಲ್ಲಿ, ಡಿ.8: ‘‘ಸರ್ಜಿಕಲ್ ಸ್ಟ್ರೈಕ್ ಕುರಿತು ಅತಿಯಾದ ಪ್ರಚಾರ ನೀಡಲಾಗುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಯಶಸ್ವಿಯಾದಾಗ ಆರಂಭದಲ್ಲಿ ಉತ್ಸಾಹ ಇರುವುದು ಸಹಜ. ಆದರೆ, ಇದರ ಬಗ್ಗೆ ನಿರಂತರವಾಗಿ ಪ್ರಚಾರ ನೀಡುವುದು ಸರಿಯಲ್ಲ’’ ಎಂದು ಸೇನಾ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದ ಲೆಫ್ಟಿನೆಂಟ್ ಜನರಲ್ ಡಿಎಸ್ ಹೂಡ(ನಿವೃತ್ತ) ಅಭಿಪ್ರಾಯಪಟ್ಟಿದ್ದಾರೆ.
‘‘ಸರ್ಜಿಸ್ಟ್ರೈಕ್ ಕುರಿತು ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಸೇನಾ ಕಾರ್ಯಾಚರಣೆ ಅತ್ಯಂತ ಮುಖ್ಯವಾದುದು. ನಮಗೆ ಅದನ್ನು ಮಾಡಬೇಕಾಗಿತ್ತು. ಈಗ ಅದು ಎಷ್ಟು ರಾಜಕೀಯವಾಗಿರಬೇಕು. ಇದು ಸರಿಯೇ? ತಪ್ಪೇ? ಎಂದು ರಾಜಕಾರಣಿಗಳ ಬಳಿ ಕೇಳಬೇಕಾಗಿದೆ’’ ಎಂದು ಚಂಡೀಗಡದಲ್ಲಿ ಸೇನಾ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಹೂಡ ಹೇಳಿದ್ದಾರೆ.
2016ರ ಸೆ.29 ರಂದು ಗಡಿರೇಖೆಯುದ್ದಕ್ಕೂ ನಡೆದ ಸರ್ಜಿಕಲ್ ಸ್ಟ್ರೈಕ್ ವೇಳೆ ಹೂಡಾ ಉತ್ತರ ಸೇನಾ ಕಮಾಂಡರ್ ಆಗಿದ್ದರು. ಪಾಕಿಸ್ತಾನದ ಭಯೋತ್ಪಾದಕರು 19 ಭಾರತೀಯ ಯೋಧರನ್ನು ಯೂರಿ ಸೇನಾ ನೆಲೆ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಉಗ್ರರ ದಾಳಿ ನಡೆದ ಎರಡು ವಾರದೊಳಗೆ ಪ್ರತೀಕಾರಕ್ಕೆ ವಿಶೇಷ ಪಡೆಗಳ ಯೋಜನೆಗೆ ಹೂಡ ಅನುಮೋದನೆ ನೀಡಿದ್ದರು.