ಸಮಸ್ಯೆಗಳ ಪರಿಹಾರಕ್ಕೆ ಕಾನೂನಿನ ಅರಿವು ಅವಶ್ಯ: ನ್ಯಾ.ಬಿ.ವಿ.ಪಾಟೀಲ
ಬೆಂಗಳೂರು, ಡಿ.9: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸಲಹಾ ಮಂಡಳಿಗಳನ್ನು ರಾಜ್ಯದ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ತೆರೆಯಲಾಗಿದ್ದು, ಈ ಕೇಂದ್ರಗಳು 1.5 ಲಕ್ಷ ರೂ.ಕಡಿಮೆ ಆದಾಯ ಇರುವ ಎಲ್ಲ ವರ್ಗಗಳ ಜನರಿಗೆ ಮತ್ತು ಎಸ್ಸಿ, ಎಸ್ಟಿ, ಮಹಿಳೆ, ಮಕ್ಕಳು ಸೇರಿ ಇನ್ನಿತರ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸಲಹೆ ಹಾಗೂ ಸಹಾಯವನ್ನು ನೀಡಲಿವೆ ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ನ ನ್ಯಾಯಾಧೀಶ ಬಿ.ವಿ. ಪಾಟೀಲ ಹೇಳಿದ್ದಾರೆ.
ರವಿವಾರ ಸಿಟಿ ಸಿವಿಲ್ ಕೋರ್ಟ್ನ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಭ್ರಷ್ಟಾಚಾರ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸಲು, ಅರ್ಹ ವ್ಯಕ್ತಿಗಳಿಗೆ ಉಚಿತ ಕಾನೂನು ಸಹಾಯ ಮತ್ತು ಸಲಹೆ ನೀಡುವುದು, ಜನತಾ ನ್ಯಾಯಾಲಯ(ಲೋಕ್ ಅದಾಲತ್) ಮೂಲಕ ವ್ಯಾಜ್ಯಗಳನ್ನು ಸಂಧಾನದ ಮುಖಾಂತರ ಮತ್ತು ಕಡಿಮೆ ವೆಚ್ಚದಲ್ಲಿ ಇತ್ಯರ್ಥ ಮಾಡಿ ನ್ಯಾಯ ಒದಗಿಸುವುದಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸಲಹಾ ಮಂಡಳಿಗಳನ್ನು ತೆರೆಯಲಾಗಿದ್ದು, ಇದರ ಸದುಪಯೋಗವನ್ನು ದುರ್ಬಲ ವರ್ಗದವರು, ಬೌದ್ಧಿಕ ವಿಕಲ ಚೇತನರು, ಕೋಮು ಗಲಭೆಯ ಸಂತ್ರಸ್ತರು, ಧಾರ್ಮಿಕ ದೌರ್ಜನ್ಯಕ್ಕೊಳಗಾದವರು ಉಚಿತ ಕಾನೂನು ಸಲಹೆ ಹಾಗೂ ಸಹಾಯವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಕಾನೂನು ನಿಂತ ನೀರಲ್ಲ, ದಿನದಿಂದ ದಿನಕ್ಕೆ ಕಾನೂನು ಬದಲಾಗುತ್ತಿರುತ್ತದೆ. ಹೀಗಾಗಿ, ಕಾನೂನಿನ ಬಗ್ಗೆ ಅರಿವು ಇರಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಅರಿವು-ನೆರವು ನೀಡಲಾಗುತ್ತಿದ್ದು, ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಷ್ಟ್ರಾಧ್ಯಕ್ಷ ಮೋಹನರಾವ್ ನಲವಡೆ ಮಾತನಾಡಿ, ಶೇ.90ರಷ್ಟು ಜನರಿಗೆ ಕಾನೂನಿನ ಅರಿವು ಇಲ್ಲವಾಗಿದೆ. ಇವರುಗಳು ಮೊದಲು ಕಾನೂನು ಪ್ರಾಧಿಕಾರಕ್ಕೆ ಹೋಗಿ ಕಾನೂನಿನ ಅರಿವನ್ನು ಪಡೆದುಕೊಂಡರೆ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸಿಕೊಳ್ಳಬಹುದು ಎಂದು ಎಂದು ಹೇಳಿದರು.
ಕರ್ನಾಟಕದ ಜನರು ಶಾಂತಿ ಸ್ವಭಾವದವರಾಗಿದ್ದು, ಸಾಮಾನ್ಯವಾಗಿ ಕಾನೂನನ್ನು ಉಲ್ಲಂಘಿಸುವ ಯಾವುದೆ ಪ್ರಯತ್ನವನ್ನು ಮಾಡುವುದಿಲ್ಲ. ಹಾಗೊಂದು ಬಾರಿ ಕಾನೂನನ್ನು ಉಲ್ಲಂಘಿಸಿ ತಪ್ಪುಗಳನ್ನು ಮಾಡಿದ್ದರೆ ಆ ತಪ್ಪುಗಳನ್ನು ಕಾನೂನು ಪ್ರಾಧಿಕಾರದಲ್ಲಿಯೇ ಪರಿಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ನೆಮ್ಮದಿಯ ಜೀವನ ಸಾಗಿಸಲು ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಕಾನೂನು ಅರಿವು ಎಲ್ಲ ಪ್ರಜೆಗಳಲ್ಲಿಯೂ ಇರಬೇಕು. ಇದು ಸಾಧ್ಯವಾದರೆ, ಸಮಾಜ ಅನೇಕ ವಿಷಯಗಳಲ್ಲಿ ಅಂಧಕಾರದಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸುನೀಲ್ಕುಮಾರ್ ಸಿಂಗ್ ಉಪಸ್ಥಿತರಿದ್ದರು.