ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 10 ಮಂದಿಯನ್ನು ರಕ್ಷಿಸಿದ ಡೆಲಿವರಿ ಬಾಯ್
ಮುಂಬೈ, ಡಿ. 19: ನಗರದ ಮರೋಲ್ ಪ್ರದೇಶದಲ್ಲಿರುವ ಕಾಮ್ಗಾರ್ ಸರಕಾರಿ ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದ ಬೆಂಕಿ ಆಕಸ್ಮಿಕದ ವೇಳೆ ಸ್ವಿಗ್ಗಿ ಡೆಲಿವರಿ ಬಾಯ್ 20 ವರ್ಷದ ಸಿದ್ದು ಹುಮನಾಬದೆ 10 ಮಂದಿ ರೋಗಿಗಳನ್ನು ರಕ್ಷಿಸಿದ್ದಾರೆ.
ಸೋಮವಾರ ಸಂಜೆ ಸಿದ್ದು ಎಂದಿನಂತೆ ಆಹಾರ ಡೆಲಿವರಿಗಾಗಿ ಹೊರಟಿದ್ದಾಗ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ ನಡೆದಿರುವುದನ್ನು ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಸಿದ್ದು ಇದೀಗ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅಗ್ನಿ ದುರಂತದ ವೇಳೆ ದಟ್ಟ ಹೊಗೆಯಿಂದಾಗಿ ಆತನಿಗೆ ಅಸೌಖ್ಯವುಂಟಾಗಿತ್ತು.
ಆ ಘಟನೆಯ ಬಗ್ಗೆ ನೆನಪಿಸುತ್ತಾ ಹತ್ತು ಜನರನ್ನು ರಕ್ಷಿಸಿದರೂ ವೃದ್ಧೆಯೊಬ್ಬರಿಗೆ ಕೆಳಕ್ಕೆ ಇಳಿಯಲು ಸಹಾಯ ಮಾಡಲೆಂದು ಕಿಟಕಿಯ ಸಮೀಪ ಏಣಿ ಇರಿಸಿದಾಗ ಅಲ್ಲಿನ ಸರಳುಗಳು ತುಂಡಾಗಿ ಆಕೆಯೂ ಕೆಳಕ್ಕೆ ಬಿದ್ದರು'' ಎಂದು ಆತ ನೋವಿನಿಂದ ಹೇಳಿದ್ದಾರೆ.
''ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು'' ಎನ್ನುವ ಆತ ತಾನು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಅವರ ಏಣಿಯ ಸಹಾಯದಿಂದ ಐದನೇ ಮಹಡಿ ತನಕ ಹತ್ತಿ ಜನರನ್ನು ರಕ್ಷಿಸಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.
ಕೆಲ ಕಡೆ ಕಿಟಕಿಯ ಗಾಜುಗಳನ್ನು ಕಲ್ಲುಗಳಿಂದ ಒಡೆದು ಜನರ ಸಹಾಯಕ್ಕೆ ಧಾವಿಸಬೇಕಾಯಿತು. ಕಿಟಕಿಯ ಅಂಚಿನಲ್ಲಿ ನಿಂತು ಜನರಿಗೆ ಏಣಿ ಮೂಲಕ ಇಳಿಯಲು ಆತ ಸಹಾಯ ಮಾಡಿದ್ದ ಹಾಗೂ ದಟ್ಟ ಹೊಗೆಯಿಂದ ಉಸಿರಾಡುವುದು ಕಷ್ಟವಾಗಿತ್ತೆಂದೂ ನೆನಪಿಸಿಕೊಂಡಿದ್ದಾರೆ.
ಆರಂಭದಲ್ಲಿ ಮುಖವನ್ನು ಟವೆಲಿನಿಂದ ಮುಚ್ಚಿದ್ದರೂ ರಕ್ಷಣಾ ಕಾರ್ಯಾಚರಣೆಯ ವೇಳೆ ಅದು ಎಲ್ಲೋ ಬಿದ್ದು ಹೋಗಿತ್ತು. ನಂತರ ಎದೆ ನೋವು ಆರಂಭಗೊಂಡಂತಿತ್ತು ಎಂದು ಘಟನೆ ನಡೆದ 15 ಗಂಟೆಗಳ ನಂತರವಷ್ಟೇ ಮಂಗಳವಾರ ಊಟ ಮಾಡಿದ ಸಿದ್ದು ಹೇಳುತ್ತಾರೆ. ಸಿದ್ದು ಶೀಘ್ರ ಗುಣಮುಖನಾಗಲಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.
ಹತ್ತನೇ ತರಗತಿ ತನಕ ಕಲಿತಿರುವ ಸಿದ್ದು ಐರೋಲಿ ನಿವಾಸಿಯಾಗಿದ್ದರೂ ಸ್ವಿಗ್ಗಿ ಕೆಲಸಕ್ಕಾಗಿ ತನ್ನ ಮಾವನ ಜತೆ ಅಂಧೇರಿಯಲ್ಲಿ ವಾಸಿಸುತ್ತಿದ್ದಾರೆ. ಆತ ಅಗ್ನಿ ಅವಘಡದ ವೇಳೆ ಹಲವರಿಗೆ ಸಹಾಯ ಮಾಡಿದ್ದಾನೆಂದು ತಿಳಿದ ಪೋಷಕರು ''ಆತ ಯಾವತ್ತೂ ಇತರರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ'' ಎನ್ನುತ್ತಾರೆ.
ಆತನ ಬೈಕಿನಲ್ಲಿದ್ದ ಹಾಗೂ ಡೆಲಿವರಿಗೆಂದು ಆತ ಕೊಂಡೊಯ್ಯುತ್ತಿದ್ದ ಆಹಾರ ಹಾಗೆಯೇ ಇತ್ತು, ಚಪ್ಪಲಿ ಕೂಡ ಅಲ್ಲೇ ಇತ್ತು, ಆದರೆ ಹೆಲ್ಮೆಟನ್ನು ಮಾತ್ರ ಯಾರೋ ಕೊಂಡೊಯ್ದಿದ್ದಾರೆ ಎಂದು ಸಿದ್ದು ಸೋದರ ತಿಳಿಸಿದ್ದಾರೆ.