ಗ್ರಾಹಕ ರಕ್ಷಣಾ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ಹೊಸದಿಲ್ಲಿ,ಡಿ.20: ಗ್ರಾಹಕರ ಹಕ್ಕುಗಳನ್ನು ಬಲಪಡಿಸುವ ಮತ್ತು ವಸ್ತುಗಳಲ್ಲಿನ ಕೊರತೆ ಮತ್ತು ಸೇವೆಗಳಲ್ಲಿ ಲೋಪಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ವ್ಯವಸ್ಥೆಯನ್ನು ಒದಗಿಸುವ ಗ್ರಾಹಕ ರಕ್ಷಣಾ ಮಸೂದೆ, 2018ನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಗ್ರಾಹಕ ರಕ್ಷಣಾ ಕಾಯ್ದೆ 1986ಕ್ಕೆ ಕೊನೆಹಾಡಲಿರುವ ನೂತನ ಮಸೂದೆಯು ಸದ್ಯ ರಾಜ್ಯಸಭೆಯಲ್ಲಿ ಹಸಿರು ನಿಶಾನೆ ಪಡೆಯಲು ಬಾಕಿಯಿದೆ. ಈ ಕುರಿತು ಮಾತನಾಡಿದ ಗ್ರಾಹಕ ವ್ಯವಹಾರಗಳ ಸಚಿವ ರಾಮ್ವಿಲಾಸ್ ಪಾಸ್ವಾನ್, ಕಳೆದ ಮೂರು ದಶಕಗಳಿಂದ ಈ ಕಾಯ್ದೆಗೆ ತಿದ್ದುಪಡಿ ತಂದಿರಲಿಲ್ಲ. ಹಾಗಾಗಿ ಗ್ರಾಹಕರ ಹಕ್ಕುಗಳನ್ನು ಬಲಪಡಿಸಲು ಕಾಯ್ದೆಗೆ ತಿದ್ದುಪಡಿ ಮಾಡುವುದು ಅಗತ್ಯವಾಗಿತ್ತು ಎಂದು ತಿಳಿಸಿದ್ದಾರೆ.
ಹೊಸ ಮಸೂದೆಯು ಗ್ರಾಹಕರ ದೂರು ಪರಿಹಾರ ಆಯೋಗ ಮತ್ತು ವೇದಿಕೆಗಳನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ರಚಿಸುವ ಪ್ರಸ್ತಾವನೆಯನ್ನು ಹೊಂದಿದೆ. ಗ್ರಾಹಕರ ಹಕ್ಕುಗಳನ್ನು ಪ್ರೋತ್ಸಾಹಿಸಲು, ರಕ್ಷಿಸಲು ಮತ್ತು ಜಾರಿಗೊಳಿಸಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವನ್ನು ರಚಿಸುವ ಅಧಿಕಾರವನ್ನು ನೂತನ ಮಸೂದೆ ಹೊಂದಿದೆ.