ಹೊಸ ಸುಂಕ ಆದೇಶ ಖಂಡಿಸಿ ಕೇಬಲ್ ಆಪರೇಟರ್ಗಳ ಪ್ರತಿಭಟನೆ
ಬೆಂಗಳೂರು, ಡಿ.21: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ರೂಪಿಸಿರುವ ಹೊಸ ಸುಂಕದ ಆದೇಶ ಖಂಡಿಸಿ ಕೇಬಲ್ ಟಿವಿ ಆಪರೇಟರ್ಗಳ ಸಂಘದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಶುಕ್ರವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಜಮಾಯಿಸಿದ್ದ ನೂರಾರು ಕೇಬಲ್ ಟಿವಿ ಆಪರೇಟರ್ಗಳು ಪ್ರಾಧಿಕಾರ ರೂಪಿಸಲು ಮುಂದಾಗಿರುವ ಹೊಸ ಸುಂಕದ ನೀತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಪ್ರಾಧಿಕಾರ ರಚಿಸಿರುವ ನೀತಿಯ ಹಿನ್ನೆಲೆಯಲ್ಲಿ ಕೇಬಲ್ ಟಿವಿ ಗ್ರಾಹಕರು ಪ್ರಸಾರಕರಿಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದಾಗಿ ಕೇಬಲ್ ಟಿವಿ ಆಪರೇಟರ್ಗಳು ಟ್ರಾಯ್ನ ಹೊಸ ಸುಂಕದ ನೀತಿಯಿಂದ ಕೇಬಲ್ ಉದ್ಯಮವನ್ನೇ ನಂಬಿರುವ ಸಾವಿರಾರು ಕುಟುಂಬಗಳು ಬೀದಿಪಾಲಾಗಲಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಸುಂಕದ ಆದೇಶದಿಂದ ಬ್ರಾಡ್ ಕಾಸ್ಟರ್ ಹಾಗೂ ಕೇಬಲ್ ಆಪರೇಟರ್ಗೆ ಹಣ ಹಂಚಿಕೆ ವಿಷಯದಲ್ಲಿ ಗಂಡಾಂತರ ಪರಿಗಣಿಸಲಿದ್ದು, ಕೇಬಲ್ ಆಪರೇಟರ್ಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೂಡಲೇ ಹೊಸ ಸುಂಕದ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ಯಾಟ್ರಿಕ್ ರಾಜು, ಕೇಬಲ್ ಆಪರೇಟರ್ಗಳು ಆರ್ಥಿಕವಾಗಿ ಹಿಂದುಳಿದಿದ್ದು, ಕನಿಷ್ಠ ತಿಳುವಳಿಕೆಯನ್ನು ಹೊಂದಿರುತ್ತಾರೆ. ಅವರು ಯಾವುದೇ ಕಾರ್ಪೊರೇಟ್ ಕಂಪನಿಗಳಿಂದಾಗಲಿ, ಚಾನಲ್ಗಳಿಂದಾಗಲಿ ನೆರವು ಪಡೆಯುವುದಿಲ್ಲ. ಕಾಲಕಾಲಕ್ಕೆ ತಂತ್ರಜ್ಞಾನವನ್ನು ಬಲಪಡಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಕಷ್ಟಪಟ್ಟು ಉದ್ಯಮವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಕೇಬಲ್ ಆಪರೇಟರ್ಗಳಿಗೆ ಕಾರ್ಪೊರೇಟ್ ಕಂಪನಿಗಳು ಹೊಡೆತ ನೀಡುತ್ತಿರುವುದು ಸರಿಯಲ್ಲ ಎಂದರು.
ಪೇ ಚಾನಲ್ಗಳ ವಿಷಯ ಬಂದಾಗಲೂ ಕೇಬಲ್ ಆಪರೇಟರ್ಗಳಿಗೆ ಅನ್ಯಾಯವಾಗಿದೆ. ಬ್ರಾಡ್ ಕಾಸ್ಟರ್ಗಳು ಶೇ. 95 ರಷ್ಟು ಹಣವನ್ನು ಜಾಹೀರಾತುಗಳಿಂದಲೇ ಪಡೆಯುತ್ತಿದ್ದು, ನಿರಂತರವಾಗಿ ದಿನದ 24 ಗಂಟೆಗಳ ಕಾಲ ಗ್ರಾಹಕರಿಗೆ ಚಾನಲ್ಗಳನ್ನು ತಲುಪಿಸುತ್ತಿರುವ ಕೇಬಲ್ ಆಪರೇಟರ್ಗಳ ಸಂಕಷ್ಟ ನಿವಾರಿಸಬೇಕು ಎಂದು ಅವರು ಒತ್ತಾಯಿಸಿದರು.
ಕೇಬಲ್ ಟಿವಿ ಗ್ರಾಹಕ ಪ್ರಾದೇಶಿಕ ಅಥವಾ ಕ್ರೀಡಾ ವಾಹಿನಿಗಳ ಹೊರತಾಗಿ ಕೇವಲ ಪ್ರಮುಖ ಚಾನೆಲ್ಗಳನ್ನು ವೀಕ್ಷಿಸಲು ಮಾಸಿಕ 450 ಪಾವತಿಸಬೇಕು. ಎಲ್ಲ ವಾಹಿನಿಗಳ ಗುಚ್ಛವನ್ನು ಪಡೆಯಬಯಸಿದರೆ ಗ್ರಾಹಕರು 800 ರೂ. ಪಾವತಿಸಬೇಕಾಗುತ್ತದೆ. ಪ್ರಾಧಿಕಾರ ಹೇಳಿದ ತಕ್ಷಣ ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿಸಲು ಮುಂದಾಗುವುದಿಲ್ಲ. ಇದರ ಹೊರೆ ಆಪರೇಟರ್ಗಳ ಮೇಲೆ ಬೀಳುತ್ತದೆ. ಹೀಗಾಗಿ, ಅದನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆಂದು ಅವರು ಎಚ್ಚರಿಕೆ ನೀಡಿದರು.