ತಂತ್ರಜ್ಞಾನ ಜನಸಾಮಾನ್ಯರಿಗೆ ದೊರಕಬೇಕು: ಹಿರಿಯ ತಜ್ಞ ವೈದ್ಯ ಡಾ.ಸುಧಾಕರ್
ಬೆಂಗಳೂರು, ಡಿ. 21: ತಂತ್ರಜ್ಞಾನವನ್ನು ಪ್ರದರ್ಶನಕ್ಕಿಡುವುದರಿಂದ ಪ್ರಯೋಜನ ಆಗುವುದಿಲ್ಲ. ಅದು ಜನಸಾಮಾನ್ಯರ ಬಳಕೆಗೆ ದೊರೆಯುವಂತಾಗಬೇಕು ಎಂದು ಹಿರಿಯ ತಜ್ಞ ವೈದ್ಯ ಡಾ.ಸುಧಾಕರ್ ವಾರಣಾಸಿ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.
ಶುಕ್ರವಾರ ನಗರದ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಇಇಇ ಸಹಯೋಗದೊಂದಿಗೆ ಆಯೋಜಿಸಿದ್ದ ‘ಐಎಸ್ಸಿ-2018’ ಅಂತರ್ರಾಷ್ಟ್ರೀಯ ವಿದ್ಯಾರ್ಥಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಪೀಳಿಗೆ ತಂತ್ರಜ್ಞಾನವನ್ನು ಸಮಾಜಕ್ಕೆ ಮತ್ತಷ್ಟು ಉಪಯೋಗವಾಗುವ ರೀತಿಯಲ್ಲಿ ರೂಪಿಸಬೇಕಿದೆ.
ಜನಸಾಮಾನ್ಯರ ಕೈಗೆಟುಕದ ತಂತ್ರಜ್ಞಾನ ರೂಪಿಸುವ ಬದಲು ಸಾಮಾನ್ಯ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವಂತಹ ತಂತ್ರಜ್ಞಾನದ ಅವಶ್ಯಕತೆ ಇದೆ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇಂದು ಆನ್ಲೈನ್ನಲ್ಲೆ ಊಟ-ತಿಂಡಿಯನ್ನು ಆರ್ಡರ್ ಮಾಡಬಹುದಾಗಿದೆ. ಇದೇ ರೀತಿ ಅಪಘಾತಗಳು ನಡೆದಾಗ ತಕ್ಷಣ ಜಿಪಿಎಸ್ ಆಧಾರದ ಮೇಲೆ ಸ್ಥಳಕ್ಕೆ ಧಾವಿಸಬಹುದಾಗಿದೆ. ಈ ಜಿಪಿಎಸ್ ತಂತ್ರಜ್ಞಾನ ಜನರಿಗೆ ಹತ್ತಿರವಾಗುತ್ತಿದೆ. 108 ಆ್ಯಂಬುಲೆನ್ಸ್ ಸೇವೆ ನನ್ನ ಪರಿಕಲ್ಪನೆ. ಮೊದಲಿಗೆ ಇದನ್ನು ಆಂಧ್ರ, ಬೆಂಗಳೂರು, ಗುಜರಾತ್ನಲ್ಲಿ ಆರಂಭಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ದೇಶದ 27 ರಾಜ್ಯಗಳಲ್ಲಿ 26ಸಾವಿರ ಆ್ಯಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೂ 1.5 ಮಿಲಿಯನ್ ಜನರ ಪ್ರಾಣ ರಕ್ಷಿಸಿದೆ ಎಂದರು.
ಎಚ್ಸಿಜಿ ಆಸ್ಪತ್ರೆಯ ತಜ್ಞ ಡಾ.ರವಿನಾಯರ್, ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಆರ್.ಜಯರಾಂ, ಪಿಲಿಪ್ಸ್ ಇನ್ನೋವೇಷನ್ ಕ್ಯಾಂಪಸ್ನ ನಿರ್ದೇಶಕ ಡಾ. ರವಿ ರಾಮಸ್ವಾಮಿ, ಡಾ.ವಿ.ಆರ್.ಸಿಂಗ್, ಜೆಇಎಫ್ ಗೌರವ ಕಾರ್ಯದರ್ಶಿ ಹಾಜರಿದ್ದರು.