ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಳ ಆತಂಕಕಾರಿ
ಮಾನ್ಯರೇ,
ನಮ್ಮ ರಾಜ್ಯದಲ್ಲಿ ಮತ್ತೊಂದು ಮಹಾ ಸಮಸ್ಯೆ ಇರುವುದು ಬಯಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಸಮೀಕ್ಷೆ ವೇಳೆ ರಾಜ್ಯದಲ್ಲಿ 22,882 ಬಾಲಕಾರ್ಮಿಕರು ಇರುವುದು ಪತ್ತೆಯಾಗಿದ್ದು, ಇದು ರಾಜ್ಯದಲ್ಲಿರುವ ಬಡತನದ ಮತ್ತೊಂದು ಕರಾಳ ಮುಖವನ್ನು ಅನಾವರಣಗೊಳಿಸಿದೆ. ಇದನ್ನು ಸ್ವತಃ ಕಾರ್ಮಿಕ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೆ ಬಾಲಕಾರ್ಮಿಕ ನಿರ್ಮೂಲನ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಸ್ವತಃ ಸರಕಾರದ ಬಳಿ ಉತ್ತರ ಇಲ್ಲ ಅನ್ನಿಸುತ್ತದೆ. ಬಡತನ, ಆರ್ಥಿಕ ಸಮಸ್ಯೆ ಹೀಗೆ ಕೆಲ ಕಾರಣಗಳಿಂದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳು ಯಾಕೆ ಬಾಲ್ಯದಲ್ಲೇ ಕೆಲಸ ಅರಸಿ ಹೋಗುತ್ತಾರೆ ಅನ್ನುವುದಕ್ಕೆ ಮೊದಲು ಕಾರಣ ಹುಡುಕಬೇಕು. ಕಾರಣಗಳನ್ನು ಪರೀಕ್ಷಿಸದೆ ಮಕ್ಕಳನ್ನು ದೂಷಿಸುವುದು ಸಲ್ಲದು. ಹೀಗಾಗಿ ಪತ್ತೆಯಾಗಿರುವ ಬಾಲಕಾರ್ಮಿಕರ ಸಮಸ್ಯೆಗಳನ್ನು ಅರಿತು ಸರಕಾರ ಅವರಿಗೆ ಜೀವನ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಬೇಕು. ಕೌಟುಂಬಿಕ ಸಮಸ್ಯೆ ಕೂಡಾ ಮಕ್ಕಳನ್ನು ಹಾದಿ ತಪ್ಪಿಸುತ್ತದೆ. ದುಡ್ಡಿನ ಆಸೆಗಾಗಿ ಮಕ್ಕಳು ಏಕಾಏಕಿ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಾರೆ ಅನ್ನುವುದು ತಪ್ಪು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಹಾಗೂ ಆಯಾಯ ಜಿಲ್ಲಾಡಳಿತ ಕೂಡಾ ಸಮಾನ ಮನಸ್ಕರಾಗಿ ಕೆಲಸ ಮಾಡಿ ಬಾಲಕಾರ್ಮಿಕ ಮುಕ್ತ ರಾಜ್ಯ ನಿರ್ಮಿಸಲು ಸಹಕರಿಸಬೇಕಾಗಿದೆ.