ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಬಂಡುಕೋರ ಆಪ್ ಶಾಸಕ
ಚಂಡಿಗಡ,ಜ.6: ಪಂಜಾಬ್ನ ಬಂಡುಕೋರ ಆಪ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರು ರವಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅಣ್ಣಾ ಹಜಾರೆಯವರ ಆಂದೋಲನದ ಬಳಿಕ ಪಕ್ಷದ ಹುಟ್ಟಿಗೆ ಆಧಾರವಾಗಿದ್ದ ಸಿದ್ಧಾಂತಗಳು ಮತ್ತು ತತ್ತ್ವಗಳಿಂದ ಅದು ಸಂಪೂರ್ಣವಾಗಿ ವಿಮುಖವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ ನವೆಂಬರ್ನಲ್ಲಿ ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದ ಖೈರಾ ತನ್ನ ರಾಜೀನಾಮೆ ಪತ್ರವನ್ನು ಆಪ್ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ರವಾನಿಸಿದ್ದಾರೆ.
ದೇಶದಲ್ಲಿಯ ಹಾಲಿ ಸಾಂಪ್ರದಾಯಿಕ ಪಕ್ಷಗಳ ರಾಜಕೀಯ ಸಂಸ್ಕೃತಿ ಕೊಳೆಯತೊಡಗಿದ್ದರಿಂದ ಆಪ್ ರಚನೆಯು ಹೊಸ ಭರವಸೆಯನ್ನು ಮೂಡಿಸಿತ್ತು. ದುರದೃಷ್ಟವಶಾತ್ ಪಕ್ಷಕ್ಕೆ ಸೇರಿದ ಬಳಿಕ ಆಪ್ನಲ್ಲಿಯ ಶ್ರೇಣಿ ವ್ಯವಸ್ಥೆಗೂ ಸಾಂಪ್ರದಾಯಿಕವಾಗಿ ಅಧಿಕಾರ ಕೇಂದ್ರೀಕೃತಗೊಂಡಿರುವ ರಾಜಕೀಯ ಪಕ್ಷಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದು ತನಗೆ ಅರಿವಾಯಿತು ಎಂದು ಖೈರಾ ಪತ್ರದಲ್ಲಿ ತಿಳಿಸಿದ್ದಾರೆ.
Next Story