ಪತಿಯ ಕೊಲೆ ಯತ್ನ ಪ್ರಕರಣ: ಪತ್ನಿ, ಪ್ರಿಯಕರ, ಮೂವರು ಸಹಚರರ ಬಂಧನ
ಬೆಂಗಳೂರು, ಜ.7: ಪ್ರಿಯಕರನ ಜತೆಗೂಡಿ ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ ಆರೋಪದಡಿ ಪತ್ನಿ, ಪ್ರಿಯಕರ ಹಾಗೂ ಮೂವರು ಸಹಚರರನ್ನು ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮಮತಾ(28), ಪ್ರಶಾಂತ್(20), ಅನಿಲ್ ಬಿಸ್ವಾಸ್(21), ಝಾಕಿರ್(20) ಮತ್ತು ಹರೀಶ್ ಕುಮಾರ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ನಗರದ ಅರಕೆರೆಯ ಬಿಟಿಎಸ್ ಲೇಔಟ್ ಕೃಷ್ಣರಾಯರ ರಸ್ತೆಯ 1ನೆ ಕ್ರಾಸ್ನಲ್ಲಿ ನಾಗರಾಜ(38) ಎಂಬುವವರು ವಾಸವಾಗಿದ್ದು, ಡಿ.14ರ ರಾತ್ರಿ ನಾಲ್ವರು ಅಪರಿಚಿತರು ಏಕಾಏಕಿ ಮನೆಗೆ ನುಗ್ಗಿ ನಾಗರಾಜು ಅವರನ್ನು ಹಿಡಿದು ಎಳೆದಾಡಿ ಮುಖಕ್ಕೆ ಹೊಡೆದು ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರ, ಮೊಬೈಲ್ ಹಾಗೂ ಇವರ ಪತ್ನಿ ಮಮತಾರ ಕೈಲಿದ್ದ 2 ಚಿನ್ನದ ಉಂಗುರಗಳನ್ನು ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ನಾಗರಾಜು ಅವರು ಹುಳಿಮಾವು ಠಾಣೆಗೆ ದೂರು ನೀಡಿದ್ದರು.
ಈ ಮಧ್ಯೆ ಡಿ.18ರಂದು ನಾಗರಾಜು ಅವರು ಠಾಣೆಗೆ ತೆರಳಿ, ಪತ್ನಿ ಮಮತಾ ಡಿ.15ರಂದು ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದಾಕೆ ವಾಪಸ್ಸು ಬಂದಿಲ್ಲ ಹಾಗೂ ಮನೆಯ ಮಾಲಕನ ಮಗ ಪ್ರಶಾಂತ್ ಸಹ ಅಂದಿನಿಂದ ಕಾಣೆಯಾಗಿದ್ದಾನೆಂದು ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ವಿವಿಧ ಮಾಹಿತಿಗಳನ್ನು ಕಲೆ ಹಾಕಿ ನಾಗರಾಜು ಅವರ ಪತ್ನಿ ಮಮತಾ ಮತ್ತು ಪ್ರಶಾಂತ್ ಹಾಗೂ ಮೂವರನ್ನು ಪತ್ತೆ ಹಚ್ಚಿ ಕರೆತಂದಿದ್ದರು ಎಂದು ತಿಳಿದುಬಂದಿದೆ.
ಬಳಿಕ ವಿಚಾರಣೆಗೊಳಪಡಿಸಿದಾಗ ನಾಗರಾಜು ಪತ್ನಿ ಮಮತಾ ತಾನು ವಾಸವಾಗಿದ್ದ ಮನೆಯ ಮಾಲಕನ ಮಗ ಪ್ರಶಾಂತ್ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದನ್ನು ಪತಿ ಅನುಮಾನಿಸಿದ್ದರು. ಪತಿ ನಾಗರಾಜು ಬದುಕಿದ್ದರೆ ತಮ್ಮ ಸಂಬಂಧ ವಿಷಯ ಹೊರಬರಬಹುದೆಂದು ತಿಳಿದು ಪತಿಯ ಕೊಲೆಗೆ 1.5 ಲಕ್ಷ ರೂ. ನೀಡಿ ದರೋಡೆಕೋರರಂತೆ ಮನೆಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ದೋಚುವ ನೆಪದಲ್ಲಿ ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ವಿಚಾರಣೆ ವೇಳೆ ಮಮತಾ ಬಾಯಿಬಿಟ್ಟಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ನೀಡಿದ ಹೇಳಿಕೆ ಮೇರೆಗೆ ಸುಲಿಗೆಯಾಗಿದ್ದ ಚಿನ್ನದ ಸರ, ಮೊಬೈಲ್, ಒಡವೆಗಳು, ಕೃತ್ಯಕ್ಕೆ ಬಳಸಿದ್ದ ಕಾರು, ಸ್ಕೂಟರ್ ಜಪ್ತಿ ಮಾಡಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಹಾಯಕ ಪೊಲೀಸ್ ಆಯುಕ್ತ ರಮೇಶ್ ನೇತೃತ್ವದಲ್ಲಿ ಹುಳಿಮಾವು ಠಾಣೆ ಎಸ್ಸೈ ಚಂದ್ರಪ್ಪ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ 2 ಲಕ್ಷ ರೂ. ಬೆಲೆಬಾಳುವ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಕಟನೆ ತಿಳಿಸಿದೆ.