ಸರ್ವೋಚ್ಚ ನ್ಯಾಯಾಲಯದ ಅಯೋಧ್ಯೆ ಪೀಠಕ್ಕೆ ಇಬ್ಬರು ನ್ಯಾಯಾಧೀಶರ ಸೇರ್ಪಡೆ,ಜ.29ಕ್ಕೆ ವಿಚಾರಣೆ
ಹೊಸದಿಲ್ಲಿ,ಜ.25: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ರಂಜನ ಗೊಗೊಯಿ ಅವರು ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ನಡೆಸಲಿರುವ ಸಂವಿಧಾನ ಪೀಠವನ್ನು ಪುನರ್ರಚಿಸಿದ್ದು,ನ್ಯಾಯಮೂರ್ತಿಗಳಾದ ಅಬ್ದುಲ್ ನಝೀರ್ ಮತ್ತು ಅಶೋಕ ಭೂಷಣ್ ಅವರನ್ನು ಹೊಸದಾಗಿ ಸೇರ್ಪಡೆಗೊಳಿಸಿದ್ದಾರೆ. ಈ ಇಬ್ಬರೂ ನ್ಯಾಯಮೂರ್ತಿಗಳು ಆಗಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಅಯೋಧ್ಯೆ ಪೀಠದ ಭಾಗವಾಗಿದ್ದರು. ಪ್ರಕರಣದ ವಿಚಾರಣೆಯು ಜ.29ರಂದು ನಡೆಯಲಿದೆ.
ತಾನು ಸಂಬಂಧಿತ ಪ್ರಕರಣವೊಂದರಲ್ಲಿ ವಕೀಲನಾಗಿದ್ದೆ ಎಂಬ ಕಾರಣವನ್ನು ನೀಡಿ ನ್ಯಾ.ಯು.ಯು.ಲಲಿತ್ ಅವರು ಈ ತಿಂಗಳ ಆರಂಭದಲ್ಲಿ ಪೀಠದಿಂದ ಹಿಂದೆ ಸರಿದಿದ್ದರು.
ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠವು ಮಂಗಳವಾರ ಪ್ರಕರಣದಲ್ಲಿ ವಿಚಾರಣೆಗಳ ವೇಳಾಪಟ್ಟಿಯನ್ನು ನಿಗದಿಗೊಳಿಸಲಿದೆ. ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ ಮತ್ತು ಡಿ.ವೈ.ಚಂದ್ರಚೂಡ್ ಅವರು ಪೀಠದ ಇನ್ನಿಬ್ಬರು ಸದಸ್ಯರಾಗಿದ್ದಾರೆ.
ಅಯೋಧ್ಯೆಯಲ್ಲಿ ಶೀಘ್ರ ರಾಮಮಂದಿರ ನಿರ್ಮಾಣಕ್ಕೆ ಹೆಚ್ಚುತ್ತಿರುವ ಆಗ್ರಹಗಳ ನಡುವೆಯೇ ಸರ್ವೋಚ್ಚ ನ್ಯಾಯಾಲಯದ ಈ ನಿರ್ಧಾರ ಹೊರಬಿದ್ದಿದೆ. ಬಿಜೆಪಿ ಸದಸ್ಯರು,ಅದರ ಕೆಲವು ಮಿತ್ರಪಕ್ಷಗಳು ಮತ್ತು ಬಲಪಂಥೀಯ ಗುಂಪುಗಳು ಸಾರ್ವತ್ರಿಕ ಚುನಾವಣೆಗೆ ಮುನ್ನ ಮಂದಿರ ನಿರ್ಮಾಣವನ್ನು ಆರಂಭಿಸಲು ಸಾಧ್ಯವಾಗುವಂತೆ ಸರಕಾರವು ವಿಶೇಷ ಅಧ್ಯಾದೇಶವನ್ನು ಹೊರಡಿಸಬೇಕು ಎಂದು ಬಯಸಿವೆ. ಪ್ರಕರಣದಲ್ಲಿ ದೈನಂದಿನ ಅಥವಾ ಆವರ್ತನ ವಿಚಾರಣೆಗಳನ್ನು ನಡೆಸಲು ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿದರೆ ಈ ಗುಂಪುಗಳಿಗೆ ಹೆಚ್ಚಿನ ಬಲ ಬಂದಂತಾಗುತ್ತದೆ.
ಶೀಘ್ರ ವಿಚಾರಣೆಯು ಬಿಜೆಪಿಯ ಪಾಲಿಗೂ ರಾಜಕೀಯವಾಗಿ ಶುಭಸುದ್ದಿಯಾಗಲಿದೆ. ಕಳೆದೆರಡು ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಯೋಜನೆಗಳ ವಿಷಯಗಳು ಬಂದಾಗಲೆಲ್ಲ ಅಯೋಧ್ಯೆಯನ್ನೇ ಬಿಂಬಿಸುತ್ತ ಬಂದಿದೆ. ಅಯೋಧ್ಯೆಯಲ್ಲಿ ವಿಶ್ವದಲ್ಲಿಯೇ ಅತ್ಯಂತ ಎತ್ತರದ ಶ್ರೀರಾಮ ವಿಗ್ರಹದ ಸ್ಥಾಪನೆ ಈ ಯೋಜನೆಯ ಅಂಗವಾಗಿದೆ. ಈ ಕ್ರಮಗಳು ಚುನಾವಣೆಯಲ್ಲಿ,ವಿಶೇಷವಾಗಿ ಅಯೋಧ್ಯೆಯಲ್ಲಿ ಶೀಘ್ರವೇ ರಾಮ ಮಂದಿರ ನಿರ್ಮಾಣವಾಗಬೇಕೆಂದು ಬಯಸುತ್ತಿರುವ ಹೆಚ್ಚಿನ ಹಿಂದುಗಳ ಮತಗಳನ್ನು ತಂದುಕೊಡುತ್ತವೆ ಎಂದು ಬಿಜೆಪಿ ನಂಬಿಕೊಂಡಿದೆ.
ಪ್ರಕರಣದಲ್ಲಿಯ ಮುಸ್ಲಿಂ ಕಕ್ಷಿದಾರರೂ ವಿವಾದವು ಶೀಘ್ರವೇ ಬಗೆಹರಿಯಬೇಕು ಎಂದು ಬಯಸಿದ್ದಾರೆ.