ಚಂದ ಕೊಚ್ಚಾರ್ ಪ್ರಕರಣ: ತನಿಖೆಯಲ್ಲಿ ಸಾಹಸಿಕತೆ ಬೇಡ, ಸಿಬಿಐಗೆ ಅರುಣ್ ಜೇಟ್ಲಿ ಸಲಹೆ
ಹೊಸದಿಲ್ಲಿ, ಜ.26: ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಒ ಚಂದ ಕೊಚ್ಚಾರ್ ವಿರುದ್ಧ ಇರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಬ್ಯಾಂಕರ್ ಕೆ . ಕಾಮತ್ ಸಹಿತ ಬ್ಯಾಂಕಿಂಗ್ ಕ್ಷೇತ್ರದ ಹಲವಾರು ಖ್ಯಾತನಾಮರನ್ನು ವಿಚಾರಣೆಗಾಗಿ ಸಿಬಿಐ ಹೆಸರಿಸಿದ ಬೆನ್ನಲ್ಲೇ ಕೇಂದ್ರ ಸಚಿವ ಅರುಣ್ ಜೇಟ್ಲಿ ಸಿಬಿಐಗೆ ಸಲಹೆಯೊಂದನ್ನು ನೀಡಿ ‘‘ಸಾಹಸಿಕ’’ ಪ್ರವೃತ್ತಿಯನ್ನು ಕೈಬಿಟ್ಟು ಮುಖ್ಯ ಟಾರ್ಗೆಟ್ ಮೇಲೆ ಗಮನ ಕೇಂದ್ರೀಕರಿಸಬೇಕೆಂದು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ಅಮೆರಿಕದ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿರುವ ಜೇಟ್ಲಿ ಫೇಸ್ ಬುಕ್ ಬ್ಲಾಗ್ ನಲ್ಲಿ ಈ ಬಗ್ಗೆ ಬರೆಯುತ್ತಾ ತನಿಖಾಕಾರರಲ್ಲಿ ಸಾಹಸಿಕ ಪ್ರವೃತ್ತಿ ಹೆಚ್ಚಾಗಿ ವೃತ್ತಿಪರತೆ ಕಡಿಮೆಯಾಗಿರುವುದರಿಂದಲೇ ಭಾರತದಲ್ಲಿ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಪಡೆಯುವವರ ಪ್ರಮಾಣ ಕಡಿಮೆಯಾಗಿದೆ ಎಂದಿದ್ದಾರೆ.
‘‘ತನಿಖಾ ಸಾಹಸಿಕತೆ ಹಾಗೂ ವೃತ್ತಿಪರ ತನಿಖೆಯ’’ ನಡುವೆ ವ್ಯತ್ಯಾಸವಿದೆ ಎಂದು ಜೇಟ್ಲಿ ಹೇಳಿದ್ದಾರೆ. ‘‘ಸಾವಿರಾರು ಕಿಮೀ ಆಚೆ ಕುಳಿತುಕೊಂಡು ಐಸಿಐಸಿಐ ಪ್ರಕರಣದ ಸಂಭಾವ್ಯ ಟಾರ್ಗೆಟ್ ಗಳ ಪಟ್ಟಿ ಬಗ್ಗೆ ಓದಿದಾಗ ಮತ್ತೆ ನನ್ನ ಮನಸ್ಸಿನಲ್ಲಿ ಇದೇ ಭಾವನೆ ಮೂಡಿದೆ- ಟಾರ್ಗೆಟ್ ಮೇಲೆ ಮುಖ್ಯವಾಗಿ ಗಮನ ಕೇಂದ್ರೀಕರಿಸದೆ, ಎಲ್ಲಿಯೂ (ಅಥವಾ ಎಲ್ಲೆಲ್ಲೂ) ತಲುಪದ ಪಯಣವೇಕೆ? ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ದೊಡ್ಡ ಹೆಸರುಗಳನ್ನು-ಸಾಕ್ಷ್ಯವಿದ್ದು ಅಥವಾ ಇಲ್ಲದೆಯೂ ಸೇರಿಸಿದರೆ ? ನಾವು ಯಾವ ಕಾರ್ಯ ಸಾಧಿಸಿದಂತಾಗುತ್ತದೆ ಯಾ ವಾಸ್ತವವಾಗಿ ಕೆಡುಕು ಮಾಡುತ್ತಿದ್ದೇವೆ ?’’ ಎಂದು ಜೇಟ್ಲಿ ಬರೆದಿದ್ದಾರೆ.
‘‘ಸಾಹಸಿಕತೆಯಿಂದ ಮಾಧ್ಯಮದಲ್ಲಿ ಮಾಹಿತಿ ಸೋರಿಕೆಯಾಗಿ, ಮಾನ ಹಾನಿಯಾಗಿ ಅಂತಿಮವಾಗಿ ನಿಯಮಗಳಿಗೆ ಕಾರಣವಾಗಬಹುದೇ ಹೊರತು ಶಿಕ್ಷೆಯಲ್ಲ. ಜನರು ತಮ್ಮ ವೃತ್ತಿಯನ್ನೇ ಕಳೆದುಕೊಳ್ಳಬೇಕಾದೀತು. ವೃತ್ತಿಪರ ತನಿಖೆ ನಿಜವಾದ ಆರೋಪಿಗಳನ್ನು ವಾಸ್ತವಿಕ ಹಾಗೂ ಒಪ್ಪತಕ್ಕಂತಹ ಸಾಕ್ಷ್ಯಗಳ ಆಧಾರದಲ್ಲಿ ಟಾರ್ಗೆಟ್ ಮಾಡುತ್ತದೆ’’ ಎಂದೂ ಜೇಟ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಗುರುವಾರ ಸಿಬಿಐ ಚಂದ ಕೊಚ್ಚಾರ್ ಮತ್ತವರ ಪತಿ ದೀಪಕ್ ಕೊಚ್ಚಾರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದು, ಮಾತ್ರವಲ್ಲದೆ ಕೆ.ವಿ ಕಾಮತ್, ಈಗಿನ ಐಸಿಐಸಿಐ ಬ್ಯಾಂಕ್ ಸಿಇಒ ಸಂದೀಪ್ ಬಕ್ಸಿ, ಗೋಲ್ಡ್ ಮ್ಯಾನ್ ಸಚ್ಸ್ ಇಂಡಿಯಾ ಅಧ್ಯಕ್ಷ ಸೊಂಜೊಯ್ ಚಟರ್ಜಿ, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಸಿಇಒ ಝರೀನ್ ದಾರುವಾಲ, ಟಾಟಾ ಕ್ಯಾಪಿಟಲ್ ಮುಖ್ಯಸ್ಥ ರಾಜೀವ್ ಸಭರ್ವಾಲ್ ಹಾಗೂ ಟಾಟಾ ಕ್ಯಾಪಿಟಲ್ ಹಿರಿಯ ಸಲಹೆಗಾರ ಹೋಮಿ ಖೊಸ್ರಖಾನ್ ಅವರನ್ನೂ ವಿಚಾರಣೆಗೊಳಪಡಿಸಬೇಕೆಂದು ಹೇಳಿತ್ತು.