ತಮಿಳುನಾಡು: ಎಐಐಎಂಎಸ್ ಗೆ ಪ್ರಧಾನಿ ಶಿಲಾನ್ಯಾಸ
ಮದುರೈ, ಜ.27: ತಮಿಳುನಾಡಿನ ಥೊಪ್ಪೂರು ನಗರದಲ್ಲಿ 1,264 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್)ಗೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದರು. ಇದೇ ಸಂದರ್ಭ ಮದುರೈ, ತಂಜಾವೂರು ಮತ್ತು ತಿರುನೆಲ್ವೇಲಿಯಲ್ಲಿರುವ ರಾಜ್ಯ ಸರಕಾರದ ಅಧೀನದ ಮೆಡಿಕಲ್ ಕಾಲೇಜುಗಳಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಉದ್ಘಾಟಿಸಿದರು.
ಅಲ್ಲದೆ 12 ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನೂ ಉದ್ಘಾಟಿಸಿದರು. ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಬರಲಿರುವ ಪ್ರಪ್ರಥಮ ಎಐಐಎಂಎಸ್ 750 ಹಾಸಿಗೆಗಳ ಅತ್ಯಾಧುನಿಕ ಸೌಲಭ್ಯ ಹಾಗೂ 1 ಸಾವಿರ ಎಂಬಿಬಿಎಸ್ ಸೀಟುಗಳನ್ನು ಹೊಂದಲಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕೇಂದ್ರ ಸರಕಾರವನ್ನು ಅಭಿನಂದಿಸಿದರು ಹಾಗೂ ಹಿಂದುಳಿದ ಜಿಲ್ಲೆಯಾಗಿರುವ ರಾಮನಾಥಪುರಂನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತೆ ಒತ್ತಾಯಿಸಿದರು. ದಿವಂಗತ ಮುಖ್ಯಮಂತ್ರಿ ಜಯಲಲಿತಾರ ಕನಸಿನಂತೆ ಈ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಸರಕಾರ ಕೇಂದ್ರಕ್ಕೆ ಎಲ್ಲಾ ನೆರವು ನೀಡಲಿದೆ ಎಂದವರು ಹೇಳಿದರು.
ಉಪಮುಖ್ಯಮಂತ್ರಿ ಒ.ಪನ್ನೀರ್ಸೆಲ್ವಂ, ಇತರ ಸಚಿವರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೇಶದ ವಿವಿಧೆಡೆ ನೂತನ ಎಐಐಎಂಎಸ್ಗಳನ್ನು ಆರಂಭಿಸುವುದಾಗಿ 2014-15ರ ಬಜೆಟ್ನಲ್ಲಿ ಕೇಂದ್ರ ಸರಕಾರ ಘೋಷಿಸಿತ್ತು. ಆಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ರಾಜ್ಯದಲ್ಲಿ ಒಂದು ಸಂಸ್ಥೆ ಆರಂಭಿಸುವಂತೆ ಕೋರಿಕೆ ಸಲ್ಲಿಸಿದ್ದರು. ಅದರಂತೆ 2015-16ರ ಬಜೆಟ್ನಲ್ಲಿ ತಮಿಳುನಾಡಿನಲ್ಲಿ ಎಐಐಎಂಎಸ್ ಸ್ಥಾಪಿಸುವುದಾಗಿ ಸರಕಾರ ಘೋಷಿಸಿತ್ತು.