ಪ್ರಿಯಾಂಕ ಗಾಂಧಿಯ ಅಗತ್ಯತೆ ದೇಶಕ್ಕಿದೆ ಎಂದ ಬಿಜೆಪಿ ಸಂಸದ
ಕೇಸರಿ ಪಕ್ಷ ಗರಂ
ಚಂಡಿಗಢ, ಜ. 28: ದೇಶಕ್ಕೆ ಹಾಗೂ ಉತ್ತರಪ್ರದೇಶದ ರಾಜಕೀಯಕ್ಕೆ ಅವರ ಅಗತ್ಯತೆ ಇದೆ ಎಂದು ಜನವರಿ 23ರಂದು ಸಕ್ರಿಯ ರಾಜಕಾರಣ ಪ್ರವೇಶಿಸಿರುವ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಉದ್ದೇಶಿಸಿ ಬಿಜೆಪಿಯ ಹಾಲಿ ಸಂಸದರೊಬ್ಬರು ಹೊಗಳಿ ಬರೆದಿರುವುದು ಬಿಜೆಪಿಯ ಕಣ್ಣು ಕೆಂಪು ಮಾಡಿದೆ.
ಜನಪ್ರಿಯ ಹಿಂದಿ ದಿನಪತ್ರಿಕೆ ‘ಪಂಜಾಬ್ ಕೇಸರಿ’ಯ ಪೇಜ್ ಒನ್ ಸಂಪಾದಕೀಯವನ್ನು ಹರ್ಯಾಣದ ಕರ್ನಾಲ್ನ ಬಿಜೆಪಿ ಸಂಸದ ಅಶ್ವಿನಿ ಕುಮಾರ್ ಚೋಪ್ರಾ ಬರೆದಿದ್ದಾರೆ. ಪಂಜಾಬ್ನ ಜಲಾಂಧರ್ನಿಂದ ಪ್ರಕಟವಾಗುವ ‘ಪಂಜಾಬ್ ಕೇಸರಿ’ ದಿನ ಪತ್ರಿಕೆಯಿಂದ ಪ್ರತ್ಯೇಕಗೊಂಡಿರುವ ಹೊಸದಿಲ್ಲಿ ಮೂಲದ ‘ಪಂಜಾಬ್ ಕೇಸರಿ’ ದಿನಪತ್ರಿಕೆಯ ಸಂಪಾದಕರಾಗಿರುವ ಚೋಪ್ರಾ ಅವರು ಪ್ರಿಯಾಂಕ ಅವರನ್ನು ಅವರ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹೋಲಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಇಂದಿರಾಗಾಂಧಿ ಅವರ ಪರಂಪರೆ ಪ್ರತಿಬಿಂಬಿಸಲಿದ್ದಾರೆ. ದೇಶದ ಮುಖ್ಯವಾಗಿ ಉತ್ತರಪ್ರದೇಶದ ಜನರು ಅವರ ಆಗಮನ ನಿರೀಕ್ಷಿಸುತ್ತಿದ್ದಾರೆ ಎಂದು ಅಶ್ವಿನಿ ‘ಪಂಜಾಬ್ ಕೇಸರಿ’ ದಿನಪತ್ರಿಕೆಯ ಶುಕ್ರವಾರದ ಸಂಪಾದಕೀಯದಲ್ಲಿ ಹೇಳಿದ್ದರು.
ಪೇಜ್ ಒನ್ ಸಂಪಾದಕೀಯದೊಂದಿಗೆ ಕನ್ನಡಿ ಪ್ರತಿಬಿಂಬದಂತೆ ಪ್ರಿಯಾಂಕಾ ಗಾಂಧಿ ಹಾಗೂ ಇಂದಿರಾ ಗಾಂಧಿ ಭಾವಚಿತ್ರವನ್ನು ಪ್ರಕಟಿಸಲಾಗಿತ್ತು. ಪತ್ರಿಕೆಯ ಒಳಗಡೆ ಎರಡೂ ಪೂರ್ಣ ಪುಟಗಳಲ್ಲಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ಪ್ರವೇಶದಿಂದ ಕಾಂಗ್ರೆಸ್ ಅದೃಷ್ಟ ಹೇಗೆ ಬದಲಾಗಲಿದೆ ಎಂಬ ವಿವರಗಳನ್ನು ನೀಡಲಾಗಿತ್ತು.