ಮಹಾರಾಷ್ಟ್ರದಲ್ಲಿ ನಾವೇ ಹಿರಿಯಣ್ಣ : ಶಿವಸೇನೆ
ಮುಂಬೈ, ಜ. 28: ಲೋಕಸಭಾ ಚುನಾವಣೆಗೆ ಬಿಜೆಪಿಯ ಜತೆ ಶಿವಸೇನೆ ತನ್ನ ಮೈತ್ರಿಯನ್ನು ಮುಂದುವರಿಸುವುದೇ ಅಥವಾ ಇಲ್ಲವೇ ಎಂಬ ಕುರಿತು ಊಹಾಪೋಹಗಳಿರುವಂತೆಯೇ ಸೋಮವಾರ ಪಕ್ಷವು ತನ್ನ ಸಂಸದರ ಮತ್ತು ಶಾಸಕರ ಸಭೆಯನ್ನು ನಡೆಸಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸೇನೆಯ ನಾಯಕ ಸಂಜಯ್ ರಾವತ್, ''ಮಹಾರಾಷ್ಟ್ರದಲ್ಲಿ ನಾವು ಹಿರಿಯಣ್ಣ ಆಗಿದ್ದೇವೆ, ಹಿಂದೆಯೂ ಆಗಿದ್ದೇವು ಮುಂದೆಯೂ ಹಿರಿಯಣ್ಣನಾಗಿಯೇ ಉಳಿಯುತ್ತೇವೆ'' ಎಂದಿದ್ದಾರೆ.
ಸಭೆಯಲ್ಲಿ ರಫೇಲ್ ಒಪ್ಪಂದದಿಂದ ಹಿಡಿದು ಮಹಾರಾಷ್ಟ್ರ ಬರ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆದಿದೆ. ಸಾಮಾನ್ಯ ವಿಭಾಗದ ಆರ್ಥಿಕ ದುರ್ಬಲರಿಗೆ ಶೇ 10 ಮೀಸಲಾತಿ ಘೋಷಿಸಿರುವುದರಿಂದ ಆದಾಯ ತೆರಿಗೆ ಮಿತಿಯನ್ನೂ 8 ಲಕ್ಷ ರೂ.ಗೆ ಏರಿಸಬೇಕೆಂದು ಶಿವಸೇನೆ ಕೇಂದ್ರವನ್ನು ಆಗ್ರಹಿಸುತ್ತದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
''8 ಲಕ್ಷ ರೂ. ವರೆಗಿನ ಆದಾಯದ ಮಂದಿಯನ್ನು ಆರ್ಥಿಕವಾಗಿ ದುರ್ಬಲರು ಎಂದು ಹೇಳಿರುವುದರಿಂದ ಅವರಿಗೆ ಆದಾಯ ತೆರಿಗೆ ವಿನಾಯಿತಿ ನೀಡಬೇಕೆಂದು ಉದ್ಧವ್ ಠಾಕ್ರೆ ಅಭಿಪ್ರಾಯ ಪಟ್ಟಿದ್ದಾರೆ'' ಎಂದು ಅವರು ತಿಳಿಸಿದರು.
ಕಳೆದೊಂದು ವರ್ಷದಿಂದ ಬಿಜೆಪಿ ಮತ್ತು ಶಿವಸೇನೆ ನಡುವಿನ ಸಂಬಂಧ ಅಷ್ಟಕಷ್ಟೇ ಆಗಿದ್ದು ಪಕ್ಷವು ಬಿಜೆಪಿಯನ್ನು ಹಲವು ವಿಚಾರಗಳ ಕುರಿತಂತೆ ಟೀಕಿಸಿದೆ. ಇತ್ತೀಚಿಗಿನ ತಿಂಗಳುಗಳಲ್ಲಿ ಉದ್ಧವ್ ಠಾಕ್ರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನೂ ಹೊಗಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ರಾಜ್ಯದಲ್ಲಿ 48 ಸ್ಥಾನಗಳ ಪೈಕಿ 41ರಲ್ಲಿ ಜಯ ಸಾಧಿಸಿತ್ತು. ಸೇನೆ ತಾನು ಸ್ಪರ್ಧಿಸಿದ್ದ 20 ಸ್ಥಾನಗಳ ಪೈಕಿ 18ರಲ್ಲಿ ಜಯ ಗಳಿಸಿತ್ತು.