ಆಧಾರ್ ಡಾಟಾ ದುರುಪಯೋಗವಾಗುತ್ತಿದೆ: ಎಸ್ ಬಿಐ ಗಂಭೀರ ಆರೋಪ
ಡಾಟಾಬೇಸ್ ಸುರಕ್ಷಿತವಾಗಿದೆ ಎಂದ ವಿಶಿಷ್ಟ ಗುರುತು ಪ್ರಾಧಿಕಾರ
ಹೊಸದಿಲ್ಲಿ, ಜ.29: ತಮ್ಮ ಆಧಾರ್ ಆಪರೇಟರ್ ಗಳ ಲಾಗಿನ್ ಮತ್ತು ಬಯೋಮೆಟ್ರಿಕ್ ಗಳನ್ನು ಅನಧಿಕೃತ ಆಧಾರ್ ಕಾರ್ಡ್ ತಯಾರಿಸಲು ದುರುಪಯೋಗಪಡಿಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಆರೋಪಿಸಿದ್ದಾರೆ ಎಂದು timesofindia.indiatimes.com ವರದಿ ಮಾಡಿದೆ. ಆದರೆ ವಿಶಿಷ್ಟ ಗುರುತು ಪ್ರಾಧಿಕಾರ ಈ ಆರೋಪಗಳನ್ನು ನಿರಾಕರಿಸಿದ್ದು, ಆಧಾರ್ ಡಾಟಾಬೇಸ್ ಸಂಪೂರ್ಣ ಸುರಕ್ಷಿತವಾಗಿದ್ದು ಯಾವುದೇ ದುರುಪಯೋಗ ನಡೆದಿಲ್ಲ ಎಂದು ಹೇಳಿದೆ.
ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಚಂಡೀಗಢ ಪ್ರದೇಶಗಳನ್ನೊಳಗೊಂಡಂತೆ ಆಧಾರ್ ನೋಂದಣಿಗಾಗಿ ಬ್ಯಾಂಕ್ ಎಫ್ಐಎ ಟೆಕ್ನಾಲಜಿ ಸರ್ವಿಸಸ್ ಪ್ರೈಲಿ. ಮತ್ತು ಸಂಜೀವಿ ಕನ್ಸಲ್ಟೆಂಟ್ಸ್ ಎಂಬ ಎರಡು ಸಂಸ್ಥೆಗಳನ್ನು ನೇಮಿಸಿತ್ತು. ಆದರೆ ಈ ಎರಡು ಏಜನ್ಸಿಗಳ ಮೂಲಕ ಕಾರ್ಯಾಚರಿಸಿದ್ದ 250 ಆಪರೇಟರುಗಳ ಪೈಕಿ ಅರ್ಧದಷ್ಟು ಮಂದಿಯನ್ನು ಎರಡು ತಿಂಗಳಲ್ಲಿಯೇ ತೆಗೆದು ಹಾಕಲಾಗಿತ್ತು ಇಲ್ಲವೇ ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಇದರಿಂದಾಗಿ ಬ್ಯಾಂಕಿನ ಆಧಾರ್ ನೋಂದಣಿ ಕಾರ್ಯಕ್ರಮ ಹಲವು ಶಾಖೆಗಳಲ್ಲಿ ಬಾಧಿತವಾಗಿ ಅದು ಗುರಿ ತಲುಪಲು ವಿಫಲವಾಗಿ ದಂಡ ಪಾವತಿಸಬೇಕಾಗಿ ಬಂದಿತ್ತು.
ಡಿಸೆಂಬರ್ 2018ರಲ್ಲಿ ಹರ್ಯಾಣದ ಜಿಂದ್ ಎಂಬಲ್ಲಿನ ಉಚನ ಗ್ರಾಮದ ಎಸ್ ಬಿಐ ಶಾಖೆಯಲ್ಲಿ ಆಧಾರ್ ಆಪರೇಟರ್ ಆಗಿದ್ದ ವಿಕ್ರಮ್ ಎಂಬವರ ಮೇಲೆ ರೂ 33 ಲಕ್ಷಕ್ಕೂ ಅಧಿಕ ದಂಡವನ್ನು ವಿಶಿಷ್ಟ ಗುರುತು ಪ್ರಾಧಿಕಾರ ವಿಧಿಸಿತ್ತು. ತನ್ನ ಆಪರೇಟರ್ ಐಡಿ ಬಳಸಿ ವಿಕ್ರಮ್ ನಕಲಿ ದಾಖಲೆಗಳ ಮುಖಾಂತರ ನವೆಂಬರ್ 9 ಹಾಗೂ 17, 2018ರ ನಡುವೆ ಬೋಗಸ್ ಆಧಾರ್ ಕಾರ್ಡುಗಳನ್ನು ತನ್ನ ಹೆಸರಿನಲ್ಲಿನ 153 ಸ್ಟೇಶನ್ ಐಡಿ ಬಳಸಿ ಸಿದ್ಧಪಡಿಸಿದ್ದ ಎಂದು ಪ್ರಾಧಿಕಾರ ಆರೋಪಿಸಿತ್ತು. ಆದರೆ ರಿಜಿಸ್ಟ್ರಾರ್ ಆಗಿ (ಆಧಾರ್ ನೋಂದಣಿ ಕಾರ್ಯ ವಹಿಸಲಾದ ಎಲ್ಲಾ ಬ್ಯಾಂಕುಗಳನ್ನು ರಿಜಿಸ್ಟ್ರಾರ್ ಎಂದು ಪರಿಗಣಿಸಲಾಗುತ್ತದೆ) ಬ್ಯಾಂಕು ಮಾತ್ರ ಈ ರೀತಿಯ ಸ್ಟೇಶನ್ ಐಡಿ ನೀಡಬಹುದಾಗಿದ್ದರೂ ಅದು ನೀಡಿರದೇ ಇದ್ದುದರಿಂದ ವಿಶಿಷ್ಟ ಗುರುತು ಪ್ರಾಧಿಕಾರದ ಸೆಕ್ಯುರಿ ವ್ಯವಸ್ಥೆಯಲ್ಲಿಯೇ ಲೋಪವಿರಬಹುದು ಎಂದು ಚಂಡೀಗಢದ ಬ್ಯಾಂಕ್ ಅಧಿಕಾರಿಗಳು ಪ್ರಾಧಿಕಾರದ ಮುಂಬೈ ಕಾರ್ಪೊರೇಟ್ ಕಚೇರಿಗೆ ಪತ್ರ ಬರೆದಿದ್ದರು.
``ಪ್ರಾಧಿಕಾರ ಹೆಚ್ಚು ಪಾರದರ್ಶಕವಾಗಿರಬೇಕು ಹಾಗೂ ಏನು ನಡೆಯತ್ತಿದೆ ಎಂಬುದನ್ನು ನಮಗೆ ತಿಳಿಸಬೇಕು, ಅದರ ಡಾಟಾ ಬೇಸ್ ಅನ್ನು ಇನ್ನಷ್ಟು ಭದ್ರಪಡಿಸಬೇಕು,'' ಎಂದು ಎಸ್ ಬಿಐ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ವಿಕ್ರಮ್ ವಿರುದ್ಧ ಪ್ರಾಧಿಕಾರ ಆರೋಪ ಹೊರಿಸಿರುವ ಹೊರತಾಗಿಯೂ ಎಸ್ಬಿಐ ನಡೆಸಿದ ಆಂತರಿಕ ತನಿಖೆ ಆತನಿಗೆ ಕ್ಲೀನ್ ಚಿಟ್ ನೀಡಿದೆ.