ಪಶ್ಚಿಮ ಬಂಗಾಳದಲ್ಲಿ ಟಿಎಂಸಿ- ಕಾಂಗ್ರೆಸ್ ನಡುವೆ ಒಡಕು
ಕಾರಣವೇನು ಗೊತ್ತಾ?
ಕೋಲ್ಕತಾ,ಜ.29: ಸಂಸದೆ ಮೌಸಮ್ ನೂರ್ ಸೋಮವಾರ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ ಜೊತೆ ಕೈಜೋಡಿಸಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ, ಟಿಎಂಸಿ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತದೆಯಾದರೂ ಅದು ಬಿಜೆಪಿ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
39ರ ಹರೆಯದ ಮಾಲ್ಡಾ (ಉತ್ತರ)ದ ಸಂಸದೆ ಮೌಸಮ್ ನೂರ್ ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸಮ್ಮುಖದಲ್ಲಿ ಟಿಎಂಸಿ ಸೇರ್ಪಡೆಗೊಂಡರು. ಕಾಂಗ್ರೆಸ್ನ ಹಿರಿಯ ನಾಯಕ ಎ.ಬಿ.ಎ ಘನಿ ಖಾನ್ ಅವರ ಸೊಸೆಯಾಗಿರುವ ನೂರ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
“ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸುವ ಶಕ್ತಿಗಳನ್ನು ಬಲಗೊಳಿಸುವ ಉದ್ದೇಶದಿಂದ ನಾನು ಟಿಎಂಸಿ ಸೇರಿರುವುದಾಗಿ ನೂರ್ ತಿಳಿಸಿದ್ದಾರೆ. ನಾನು ಅಕ್ಕನಿಂದ (ಮಮತಾ) ಸ್ಫೂರ್ತಿ ಹೊಂದಿದ್ದೇನೆ. ಅವರ ಮಾರ್ಗದರ್ಶನದಲ್ಲಿ ನಾನು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ನಾವು ಬಿಜೆಪಿ ವಿರುದ್ಧ ಹೋರಾಡಬೇಕಿದೆ ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಎಲ್ಲ 42 ಸ್ಥಾನಗಳನ್ನು ಜಯಿಸಲಿದೆ” ಎಂಬ ವಿಶ್ವಾಸವನ್ನು ನೂರ್ ವ್ಯಕ್ತಪಡಿಸಿದ್ದಾರೆ.