ಪಾಕಿಸ್ತಾನ,ಅಫ್ಘಾನಿಸ್ತಾನಗಳಲ್ಲಿರುವ ಭಾರತ ಮಾತೆಯ ಮಕ್ಕಳಿಗೆ ನೆರವಾಗಲು ಸರಕಾರ ಬದ್ದ: ಮೋದಿ
ಜಮ್ಮು,ಫೆ.3: ಪೌರತ್ವ(ತಿದ್ದುಪಡಿ) ಮಸೂದೆಯನ್ನು ರವಿವಾರ ಬಲವಾಗಿ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು,ತನ್ನ ಸರಕಾರವು ಪಾಕಿಸ್ತಾನ,ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಕಿರುಕುಳಗಳನ್ನು ಅನುಭವಿಸಿರುವ ಭಾರತ ಮಾತೆಯ ಮಕ್ಕಳಿಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.
ಜಮ್ಮು ಪ್ರದೇಶದ ವಿಜಯಪುರದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಈ ಎಲ್ಲ ಜನರು ಒಂದು ಕಾಲದಲ್ಲಿ ಭಾರತದ ಭಾಗವೇ ಆಗಿದ್ದರು,ಆದರೆ 1947ರಲ್ಲಿ ವಿಭಜನೆಯಿಂದಾಗಿ ನಮ್ಮಿಂದ ಪ್ರತ್ಯೇಕಿಸಲ್ಪಟ್ಟಿದ್ದರು ಎಂದರು.
ಮಸೂದೆಯನ್ನು ವಿರೋಧಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಮೋದಿ,ಅದು ಅಧಿಕಾರದಲ್ಲಿದ್ದಾಗ ನಮ್ಮ ಸೋದರರು ಮತ್ತು ಸೋದರಿಯರ ನೋವುಗಳನ್ನು ಕಡೆಗಣಿಸಿತ್ತು. ಆದರೆ ನಾವು ಒಂದು ಬದ್ಧತೆಯೊಂದಿಗೆ ಪೌರತ್ವ ಮಸೂದೆಯನ್ನು ತಂದಿದ್ದೇವೆ. ಈ ಜನರ ಧರ್ಮದ ಆಧಾರದಲ್ಲಿ ಅವರ ವಿರುದ್ಧ ತಾರತಮ್ಯ ನಡೆದರೆ ದೇಶವು ಅವರೊಂದಿಗೆ ನಿಲ್ಲಲಿದೆ ಎಂದರು.
ಕರ್ತಾರ್ಪುರ ಕಾರಿಡಾರ್ ವಿವಾದವನ್ನು ಪ್ರಸ್ತಾಪಿಸಿದ ಅವರು,ಹಿಂದಿನ ಸರಕಾರಗಳು ದೇಶದ ಅಗತ್ಯಗಳು ಮತ್ತು ಭಾವನೆಗಳನ್ನು ಕಡೆಗಣಿಸಿದ್ದವು. ಕರ್ತಾರ್ಪುರ ಕಾರಿಡಾರ್ ಇದಕ್ಕೆ ನಿದರ್ಶನವಾಗಿದೆ. ಅವರು ಆಗಲೇ ಗಮನ ಹರಿಸಿದ್ದರೆ ಗುರು ನಾನಕದೇವ್ರ ಭೂಮಿ ಇಂದು ಭಾರತದ ಭಾಗವಾಗಿರುತ್ತಿತ್ತು ಎಂದರು.
ಇದಕ್ಕೂ ಮುನ್ನ ಮೋದಿ ಜಮ್ಮು-ಕಾಶ್ಮೀರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.